ಹಾಸನ: ಹಾಸನಾಂಭೆಯ ಉತ್ಸವ ಸರ್ಕಾರಿ ಕಾರ್ಯಕ್ರಮ. ಆದರೇ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ನಮೂದಿಸಿಲ್ಲ. ಇಲ್ಲಿ ರಾಜಕೀಯ ಮಾಡಬಾರದು, ದೇವರ ಉತ್ಸವವನ್ನು ಮಾತ್ರ ಮಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನಾಂಬೆಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ನಾನು ಸಂಸದನಾಗಿದ್ದೇನೆ. ಹಾಸನಾಂಭೆಯ ಉತ್ಸವದಲ್ಲಿ ನನ್ನ ಹೆಸರು ನಮೂದಿಸಿರಲಿಲ್ಲ. ಈ ವಿಷಯದ ಕುರಿತು ಜಿಲ್ಲಾಧಿಕಾರಿ ಅವರಿಗೆ ಮಾತನಾಡಿದ ನಂತರ ಆಹ್ವಾನ ಪತ್ರಿಕೆಯಲ್ಲಿ ಬದಲಾವಣೆ ಮಾಡಿ, ನಂತರ ತಮಗೆ ಆಹ್ವಾನ ನೀಡಿದರು. ಇಲ್ಲಿ ರಾಜಕೀಯ ಮಾಡಬಾರದು. ದೇವರ ಉತ್ಸವ ಮಾತ್ರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಸಾರಾ ಮಹೇಶ್ ಹಾಗೂ ಹೆಚ್ ವಿಶ್ವಾನಾಥ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಒಂದು ತರಹ ಮೂಡನಂಬಿಕೆ ಇದ್ದ ಹಾಗೇ. ಇದು ಅವರಿಬ್ಬರಿಗೆ ಬಿಟ್ಟ ವಿಚಾರ, ಇದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಜೆಡಿಎಸ್ ಶಾಸಕ ಸ್ಥಾನಕ್ಕೆ ಯಾರು ರಾಜೀನಾಮೆ ನೀಡಿಲ್ಲ. ಇದರ ಬಗ್ಗೆ ನಮ್ಮ ಹಿರಿಯರು, ಸಾರಾ ಮಹೇಶ್ ಅವರನ್ನು ಕರೆದು ಮಾತಾನಾಡಿ ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ರೇವಣ್ಣ, ಪತ್ನಿ ಭವಾನಿ ಅವರು ಕೂಡ ದೇವರ ದರ್ಶನ ಪಡೆದರು.
Advertisement