ನಾನು ತಪ್ಪು ಮಾಡಿಲ್ಲ, ಹೀಗಾಗಿ ಜನ ಬೆಂಬಲ ಸಿಕ್ಕಿದೆ, ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ: ಡಿ.ಕೆ. ಶಿವಕುಮಾರ್

ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಜನರ ಬೆಂಬಲ ಸಿಕ್ಕಿದೆ. ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದ್ದಾರೆ.
ನಾನು ತಪ್ಪು ಮಾಡಿಲ್ಲ, ಹೀಗಾಗಿ ಜನ ಬೆಂಬಲ ಸಿಕ್ಕಿದೆ, ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ: ಡಿ.ಕೆ. ಶಿವಕುಮಾರ್

ನವದೆಹಲಿ: ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಜನರ ಬೆಂಬಲ ಸಿಕ್ಕಿದೆ. ಕಷ್ಟಕಾಲದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಕಾನೂನಿನ ಮೇಲೆ ಗೌರವವಿದೆ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರು 48 ದಿನಗಳ ನಂತರ ನಿನ್ನೆ ರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದು, ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದೆರು.

 ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ವಕೀಲರು ಹಾಗೂ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ನಂತರ ಬೆಂಗಳೂರಿಗೆ ಆಗಮಿಸುತ್ತೇನೆ ಎಂದರು.

‘ಬೆಳಗ್ಗೆ ತಾಯಿ ಹಾಗೂ ಪತ್ನಿಯ ವಿಚಾರಣೆ ಇತ್ತು. ಅದು 30ನೇ ತಾರೀಕಿಗೆ ಮುಂದೂಡಿಕೆಯಾಗಿದೆ. 31ಕ್ಕೆ ಸಮನ್ಸ್ ನೀಡಬೇಕು ಎಂದು ಹೇಳಿದ್ದಾರೆ. ನಾವು ವಿಚಾರಣೆಯನ್ನು ಬೆಂಗಳೂರಿನಲ್ಲೇ ನಡೆಸುವಂತೆ ಕೇಳಿಕೊಂಡಿದ್ದೇವೆ. ಅವರು ಏನೇ ಮಾಡಲಿ ಉತ್ತರ ಕೊಡಲು ನಾವು ತಯಾರಿದ್ದೇವೆ. ಈಗ ನನ್ನ ಪರ ವಾದ ಮಾಡಿರುವ ವಕೀಲರನ್ನು ಭೇಟಿ ಮಾಡಬೇಕಿದೆ. ಅವರು ನ್ಯಾಯಾಲಯದಲ್ಲಿ ಇರುವುದರಿಂದ ಸಂಜೆಯ ನಂತರ ಅವರ ಮನೆಗೆ ಹೋಗಿ ಭೇಟಿ ಮಾಡಬೇಕು. ಅದು ನನ್ನ ಕರ್ತವ್ಯ. ನಂತರ ನಮ್ಮ ನಾಯಕರನ್ನು ಭೇಟಿ ಮಾಡಿ ಬೆಂಗಳೂರಿನತ್ತ ಪ್ರಯಾಣ ಮಾಡುತ್ತೇನೆ ಎಂದರು.

ನಾನು ಈಗ ಮೊದಲು ಮಾಡಬೇಕಾಗಿರುವುದು ಉಪಕಾರ ಸ್ಮರಣೆ. ನನ್ನ ಪರವಾಗಿ ನಿಂತವರನ್ನು ಭೇಟಿ ಮಾಡಿ ಅವರಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸದಿದ್ದರೆ ನಾನು ಮನುಷ್ಯನಾಗಲು ಸಾಧ್ಯವಿಲ್ಲ. ಎಷ್ಟೋ ಜನ ರಸ್ತೆಯಲ್ಲಿ ನಿಂತು, ಬಂದ್ ಮಾಡಿ, ನನ್ನ ಪರ ಪ್ರತಿಭಟನೆ ಮಾಡಿ, ಮನೆಯಲ್ಲಿ ಕೂತು ಧ್ಯಾನ ಮಾಡಿ, ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರವಲ್ಲ. ಕೆಲವು ಬಿಜೆಪಿ ನಾಯಕರು ಸೇರಿದಂತೆ ಎಲ್ಲ ಪಕ್ಷದವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಜೆಡಿಎಸ್‌ನವರು ನನಗೆ ಬೆಂಬಲಿಸಿದ್ದಾರೆ. ಇನ್ನು ಕಾಂಗ್ರೆಸ್ ನವರು ನನ್ನ ಕುಟುಂಬ. ಎಲ್ಲರೂ ಮನಸ್ಸು ಬಿಚ್ಚಿ ಪ್ರೀತಿ ತೋರಿದ್ದಾರೆ. ಆದರೆ ಕೆಲವರು ಮಾತ್ರ ನನ್ನ ಪರಿಸ್ಥಿತಿ ನೋಡಿ ಖುಷಿ ಪಟ್ಟಿದ್ದಾರೆ. ಏನು ಮಾಡಲು ಆಗುವುದಿಲ್ಲ. ಅವರೆಲ್ಲ ಇರಬೇಕು. ಅವರಿಂದಲೇ ನಾವು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ನನಗೆ ಅವರ ಮೇಲೆ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ನನಗೆ ಏನೇನಾಗುತ್ತಿದೆ ಎಂಬುದು ಗೊತ್ತಿತ್ತು. ಹೀಗಾಗಿ ಮುಚ್ಚುಮರೆ ಮಾಡುವುದಿಲ್ಲ. ಇವೆಲ್ಲವನ್ನೂ ವಿಧಾನಸಭೆಯ ಅಧಿವೇಶನದಲ್ಲೇ ಹೇಳಿ ಬಂದಿದ್ದೆ. ಯಾರ ಒತ್ತಡವಿತ್ತು. ಯಾರು ಏನೇನು ಆಫರ್ ನೀಡಿದ್ದರು.... ಆದರೂ ನಾನೇ ಸಮನ್ಸ್ ಸಿಕ್ಕಿದ ತಕ್ಷಣ ಒಂದು ನಿಮಿಷವನ್ನು ವ್ಯರ್ಥ ಮಾಡದೇ ಮಧ್ಯಾಹ್ನ ದೆಹಲಿಗೆ ಬಂದು ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದ್ದೇನೆ ಎಂದರು.

ಧೈರ್ಯದಿಂದ ಉತ್ತರ ನೀಡುವಂತೆ ಪುತ್ರಿಗೂ ಹೇಳಿದ್ದೆ, ಆಕೆ ಕೂಡ ಉತ್ತರ ನೀಡಿದ್ದಾಳೆ. ನನ್ನ ತಾಯಿ ಅವರಿಗೆ ವಯಸ್ಸಿನ ಸಮಸ್ಯೆ ಇದೆ. ಪ್ರಯಾಣ, ಭಾಷೆ ಸೇರಿದಂತೆ ಕೆಲವು ಸಮಸ್ಯೆಗಳು ಇವೆ. ನಾವು ಕೋರ್ಟ್ ಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಅವರ ಪ್ರಯತ್ನ ಅವರು ಮಾಡಲಿ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಪಕ್ಷ ಭೇದ ಮರೆತು ಅನೇಕರು ಬೆಂಬಲಿಸಿದ್ದಾರೆ. ಸಿಪಿಎಂ, ಸಿಪಿಐಎಂ, ಟಿಎಂಸಿ ಜನತಾದಳ ಸೇರಿದಂತೆ ಅನೇಕ ನಾಯಕರು ನನಗೆ ಬೆಂಬಲ ನೀಡಿದ್ದಾರೆ. ಕೇರಳದಲ್ಲಿ ರಾತ್ರೋರಾತ್ರಿ ಪಂಜಿನ ಮೆರವಣಿಗೆ ಮಾಡಿದ್ದಾರೆ. ನಾನು ಇಡಿ ಕಚೇರಿಯಲ್ಲಿ, ಪೊಲೀಸ್ ಠಾಣೆಯಲ್ಲಿದ್ದಾಗ ಪ್ರತಿ ದಿನ ಮುನ್ನೂರು ನಾನೂರು ಹುಡುಗರು ಬರುತ್ತಿದ್ದರು. ನನ್ನನ್ನು ಕಾಯುತ್ತಾ ತಿಂಗಳುಗಟ್ಟಲೇ ಇಲ್ಲೇ ಉಳಿದುಕೊಂಡಿದ್ದಾರೆ. ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ನಂಜಾವಧೂತ ಸ್ವಾಮಿಗಳ ಭಾಷಣ, ಅವರ ವ್ಯಾಖ್ಯಾನ ಈಗಷ್ಟೇ ತಿಳಿದುಕೊಂಡೆ. ಅನೇಕ ಮಠದ ಸ್ವಾಮಿಗಳು ಕೋರ್ಟ್ ಗೆ ಆಗಮಿಸಿ ಭೇಟಿ ಮಾಡಿದ್ದರು. ಅವರೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾರ್ಥನೆ ಫಲ ಇವೆಲ್ಲವೂ ಸೇರಿ ನನಗೆ ಶಕ್ತಿ ಕೊಟ್ಟಿದ್ದಾರೆ. ನಾನು ಕಾನೂನಿಗೆ ಬದ್ಧನಾಗಿರುವ ಪ್ರಜೆ. ಏಳು ಬಾರಿ ಶಾಸಕನಾಗಿದ್ದೇನೆ. ನಾವು ಕಾನೂನುಗಳನ್ನು ಮಾಡಿದ್ದೇವೆ. ಅವುಗಳನ್ನು ನಾವು ಗೌರವಿಸಬೇಕಿದೆ. ಚುನಾವಣಾ ಆಯೋಗ ಕೇಳಿರುವುದನ್ನು ನಾನು ಘೋಷಿಸಿದ್ದೇನೆ. ಈ ವಿಚಾರಗಳೆಲ್ಲವನ್ನು ನಾನು ಬೆಂಗಳೂರಿನಲ್ಲಿ ಮಾತನಾಡುತ್ತೇನೆ. ಬೇರೆಯವರ ಆಸ್ತಿ ಘೋಷಣೆ, ನನ್ನ ಆಸ್ತಿ ಘೋಷಣೆ ಎಲ್ಲದರ ಬಗ್ಗೆ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com