ಮೈಸೂರು: ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶಗಳು ಪ್ರಕಟವಾಗಿದ್ದು, ಈ ನಡುವಲ್ಲೇ ರಾಜ್ಯ ಕಾಂಗ್ರೆಸ್'ಗೆ ಮರ್ಮಾಘಾತವಾಗಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಹೆಚ್. ವಿಜಯ್ ಶಂಕರ್ ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳಲು ವಿಜಯ್ ಶಂಕರ್ ನಿರ್ಧರಿಸಿದ್ದು, ಈ ಬಗ್ಗೆ ತಮ್ಮ ಆಪ್ತ ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೊಳ್ಳಲು ನಿರ್ಧರಿಸಿದ್ದು, ಇದಕ್ಕೆ ಯಡಿಯೂರಪ್ಪ ಅವರೂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ತಿಳಿದುಬಂದಿದೆ.
ಸಂಸದೀಯ ಚುನಾವಣೆ ವೇಳೆ ಸೋಲು ಕಂಡ ಬಳಿಕ ವಿಜಯ್ ಶಂಕರ್ ಬಗ್ಗೆ ಕಾಂಗ್ರೆಸ್ ಅಷ್ಟಾಗಿ ಗಮನ ಹರಿಸಿರಲಿಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿಂದ ವಿಜಯ್ ಶಂಕರ್ ಅವರು ದೂರ ಸರಿದಿದ್ದರು. ಇದೀಗ ಬೆಂಬಲಿಗರೊಂದಿಗೆ ಬಿಜೆಪಿ ಜೊತೆಗೆ ಕೈಜೋಡಿಸಲು ನಿರ್ಧರಿಸಿದ್ದು, ಉಪ ಚುನಾವಣೆಗೂ ಮೊದಲೇ ಕಮಲ ಹಿಡಿಯುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಜಯ್ ಶಂಕರ್ ಅವರು ಬಿಜೆಪಿಗೆ ಹೋಗುತ್ತಿರುವುದ ಇದು ಮೊದಲೇನಲ್ಲ. 1991ರಲ್ಲಿ ಕಾಂಗ್ರೆಸ್'ಗೆ ಗುಡ್ ಬೈ ಹೇಳಿದ್ದ ವಿಜಯ ಶಂಕರ್ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ, 2 ವರ್ಷಗಳ ಹಿಂದೆಯಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದರು.
ಈ ಹಿಂದೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ವಿಜಯ್ ಶಂಕರ್ ಅವರು ಗೆಲವು ಸಾಧಿಸಿದ್ದು, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ವಿಜಯ್ ಶಂಕರ್ ಸಹಾಯಕರಾಗುತ್ತಾರೆಂದು ಬಿಜೆಪಿ ಚಿಂತಿಸಿದೆ. ಸಿದ್ದರಾಮಯ್ಯ ಸ್ವಕ್ಷೇತ್ರವನ್ನು ಹೇಗಾದರೂ ತನ್ನ ಪಾಲಿನತ್ತ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ಈ ನಡುವೆ ವಿಜಯ್ ಶಂಕರ್ ಅವರು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಬಿಜೆಪಿ ಸೇರ್ಪಡೆ ಕುರಿತು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.
ಅ.30 ರಂದು ಮತ್ತೆ ಪಿರಿಯಾಪಟ್ಟಣದಲ್ಲಿ ವಿಜಯ್ ಅವರು ಸಭೆ ನಡೆಸಲಿದ್ದು, ಇದೇ ವೇಳೆ ಬಿಜೆಪಿಗೆ ಮರುಸೇರ್ಪಡೆಗೊಳ್ಳಲಿದ್ದಾರೆಂದು ವರದಿಗಳು ತಿಳಿಸಿವೆ.
Advertisement