ಬೆಂಗಳೂರು: ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ವಿಶೇಷ ಕಾಳಜಿ, ಪ್ರೀತಿಯಿದೆ. ಹೀಗಾಗಿ ಅವರು ತಮ್ಮ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರಬಹುದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿ.ಕೆ ಶಿವಕುಮಾರ್ ಅವರಿಗೆ ರಾಜ್ಯದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ಅವರು ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರು ಅಸಮಾಧಾನ ತೋರ್ಪಡಿಸಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸೋಮವಾರ ಸದಾಶಿವ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ತಮ್ಮ ಮೇಲಿನ ಪ್ರೀತಿ ಕಾಳಜಿಯಿಂದ ಮಾತನಾಡಿರಬಹದು. ಅದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ.
ಬೆಂಗಳೂರಿಗೆ ಬಂದಾಗ ನನ್ನ ಅಭಿಮಾನಿಗಳು ಪಕ್ಷಾತೀತ ಸ್ವಾಗತ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು, ಕನ್ನಡ ಸಂಘಟನೆ ನಾಯಕರು ಬಂದಿದ್ದರು. ಯಾರನ್ನೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಕಚೇರಿ ನನಗೆ ದೇವಸ್ಥಾನವಿದ್ದಂತೆ ಅದಕ್ಕೆ ಮೊದಲು ಪಕ್ಷದ ಕಚೇರಿಗೆ ಭೇಟಿ ನೀಡಿದ್ದೆ. ಇಂದು ಸಹ ಜೆಡಿಎಸ್ ಶಾಸಕರು ನನ್ನ ಮನೆಗೆ ಬಂದು ಭೇಟಿ ಮಾಡಿದ್ದಾರೆ. ಅವರನ್ನು ಬರಬೇಡಿ ಎಂದು ಹೇಳಲು ಸಾಧ್ಯವೇ? ನನ್ನನ್ನು ಯಾರು ಬೇಕಾದರೂ ಭೇಟಿ ಮಾಡಲಿ ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ನಾನು ನನ್ನ ವಕೀಲ ರನ್ನು ಭೇಟಿ ಮಾಡಬೇಕಿದೆ. ಇದಾದ ಬಳಿಕ ಮುಂದಿನ ಕಾರ್ಯಕ್ರಮ ಕುರಿತು ಮಾಹಿತಿ ನೀಡುವುದಾಗಿ ಸ್ಪಷ್ಟಪಡಿಸಿದರು.
Advertisement