ಬಿಬಿಎಂಪಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯಲಿದೆ: ವಿ.ಸೋಮಣ್ಣ

ವಸತಿ ಸಚಿವ ವಿ.ಸೋಮಣ್ಣ ಅವರ ನಿವಾಸಕ್ಕೆ ಇಂದು ಬೆಳಗ್ಗೆ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಸಚಿವರೊಂದಿಗೆ ಮಾತುಕತೆ ನಡೆಸಿದರು.
ನಳಿನ್ ಕುಮಾರ್ ಕಟೀಲ್ ಮತ್ತು ವಿ.ಸೋಮಣ್ಣ
ನಳಿನ್ ಕುಮಾರ್ ಕಟೀಲ್ ಮತ್ತು ವಿ.ಸೋಮಣ್ಣ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅವರ ನಿವಾಸಕ್ಕೆ ಇಂದು ಬೆಳಗ್ಗೆ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಸಚಿವರೊಂದಿಗೆ ಮಾತುಕತೆ ನಡೆಸಿದರು.

ಭೇಟಿ ಬಳಿಕ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರೊಂದಿಗೆ, ಬೆಂಗಳೂರಿನಲ್ಲಿ ಇದ್ದಾಗ ಪಕ್ಷದ ಮುಖಂಡರನ್ನು ಭೇಟಿಯಾಗುತ್ತೇನೆ, ಇಂದು ಸಚಿವ ವಿ. ಸೋಮಣ್ಣ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ಇದು ಅನೌಪಚಾರಿಕ ಭೇಟಿ. ಇಲ್ಲಿ ಕಾರ್ಯಕರ್ತರ ಜೊತೆ ಸಭೆಯನ್ನೂ ಮಾಡಿದ್ದೇವೆ. ಕೋರ್ ಕಮಿಟಿ ಪ್ರತಿ ಬಾರಿಯೂ ನಡೆಯುತ್ತದೆ, ಪಕ್ಷದ ವಿಚಾರಗಳು ಅಲ್ಲಿ ಚರ್ಚೆಯಾಗುತ್ತವೆ ಎಂದರು.

ಸೋಮಣ್ಣ ಪಕ್ಷದ ಹಿರಿಯರು. ಅವರ ಜತೆ ಸಂಘಟನೆ ಕುರಿತು ಚರ್ಚಿಸಲಾಗಿದೆ. ಸ್ಥಳೀಯ ನಾಯಕರ ಜತೆಗೂ ಮಾತುಕತೆ ‌ನಡೆಸಲಾಗಿದೆ. ಸೋಮಣ್ಣ ಅವರ ಮಾರ್ಗದರ್ಶನ ಪಡೆದು ಸಲಹೆ ಸೂಚನೆಗಳನ್ನು ಕೇಳಿದ್ದೇನೆ ಎಂದು ಕಟೀಲ್ ಹೇಳಿದರು. ಇಂದು ರಾತ್ರಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಳಿನ್ ಕುಮಾರ್ ಕಟೀಲ್ ನಿರಾಕರಿಸಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಬಿಬಿಎಂಪಿಯಲ್ಲಿ ಬಿಜೆಪಿ ಈ ಬಾರಿ ಅಧಿಕಾರ‌ ಹಿಡಿಯಲಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಪಾಲಿಕೆಯಲ್ಲಿ ನಮಗೆ ಅಧಿಕಾರ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ ಎಂಬುದು ಎಲ್ಲ ಸದಸ್ಯರ ಅಭಿಪ್ರಾಯ ವಾಗಿದೆ. ಹೀಗಾಗಿ ಬಿಜೆಪಿ ಈ ಬಾರಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.

ಮೈಸೂರು ದಸರಾ ಯಶಸ್ವಿಯಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದು ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿವೆ ಎಂದು ಸೋಮಣ್ಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com