ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಹಳೆಯದಾದ ಕಾಂಗ್ರೆಸ್ ಪಕ್ಷ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. 1978ರಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾದಾಗ ಚಿಕ್ಕಮಗಳೂರು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇಂದಿರಾ ಗಾಂಧಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಸೋನಿಯಾ ಗಾಂಧಿ 1999ರ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸ್ಪರ್ಧಿಸುವ ಮೂಲಕ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ನಾಯಕತ್ವದ ಬಿಜೆಪಿ ವಿರುದ್ಧ ಸೆಡ್ಡು ಹೊಡೆದಿದ್ದರು.
19 ವರ್ಷಗಳ ಬಳಿಕ 2019ರಲ್ಲಿ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ, ತನ್ನ ತಾಯಿ ಹಾಗೂ ಅಜ್ಜಿಯ ಹೆಜ್ಜೆಗಳನ್ನು ಅನುಸರಿಸಲಿಲ್ಲ. ಬದಲಿಗೆ ತನ್ನ ಸುರಕ್ಷತೆಗಾಗಿ ಕೇರಳದ ವೈನಾಡು ಪ್ರದೇಶವನ್ನು ಆಯ್ಕೆ ಮಾಡಿಕೊಂಡರು. ರಾಜ್ಯದ 28 ಕ್ಷೇತ್ರಗಳ ಪೈಕಿ ಕೇವಲ 1 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಅತ್ಯಂತ ಕಳಪೆ ಸಾಧನೆ ಮಾಡಿತು.
ಅಧ್ಯಕ್ಷರನ್ನೊಳಗೊಂಡಂತೆ ಕೆಲವು ಮಂದಿಯನ್ನು ಹೊರತುಪಡಿಸಿದರೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿಇದೇ ಮೊದಲ ಬಾರಿಗೆ ಪದಾಧಿಕಾರಿಗಳೇ ಇಲ್ಲದಂತಾಗಿದೆ. ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಹೆಸರನ್ನು ಸೂಚಿಸಿಲ್ಲ. ಸದಸ್ಯತ್ವ ನೋಂದಣಿ ಕೂಡಾ ಸ್ಥಗಿತಗೊಂಡಿದೆ.
ಡಿಕೆ ಶಿವಕುಮಾರ್ ಬಂಧನದ ನಂತರ ತೋರಿಕೆಗಾಗಿ ಸ್ಪಲ್ಪ ಪ್ರತಿಭಟನೆ ನಡೆಸಿ ನಂತರ ಸುಮ್ಮನಾಗಿಬಿಟ್ಟಿದೆ. ಆದರೆ, ಅಂದುಕೊಂಡ ರೀತಿಯಲ್ಲಿ ಪಕ್ಷದ ಮುಖಂಡರಿಂದ ಪ್ರತಿಭಟನೆ ಆಗಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಕೆಲ ನಾಯಕರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು,ರಾಜ್ಯಮಟ್ಟದ ನಾಯಕತ್ವದ ಕೊರತೆ ಇದೆ ಎಂದು ರಾಜಕೀಯ ವಿಶ್ಲೇಷಕ ಮೋಹನ್ ರಾಮ್ ಹೇಳುತ್ತಾರೆ.
ಲೋಕಸಭಾ ಚುನಾವಣೆ ಸೋಲಿನ ಬಳಿಕವೂ ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಬೆಂಬಲಿಗರು ಇದ್ದಾರೆ. ಆದಾಗ್ಯೂ 1990ರಲ್ಲಿ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಆಗಿನ ಪಕ್ಷದ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ವಜಾಗೊಳಿಸಿದ ನಂತರ ಕಾಂಗ್ರೆಸ್ ಪಕ್ಷ ಕೇವಲ 39 ಸ್ಥಾನಗಳಿಗೆ ಸಿಮೀತವಾಯಿತು. ಜನತಾ ದಳ ಅಧಿಕಾರಕ್ಕೆ ಬಂತು ನಂತರ ಲಿಂಗಾಯಿತ ಸಮುದಾಯದ ಬೆಂಬಲ ಪಡೆಯುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾದರು.
ಎಸ್ ಎಂ ಕೃಷ್ಣ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ನಲ್ಲಿ ಪ್ರಭಾವಿ ಒಕ್ಕಲಿಗ ನಾಯಕರ ಕೊರತೆಯಿದೆ. ಜೆಡಿಎಸ್ ಗೆ ತೀವ್ರ ಪೈಪೋಟಿ ನೀಡುವಂತಹ ಒಕ್ಕಲಿಗ ನಾಯಕರ ಕೊರತೆ ಕಾಂಗ್ರೆಸ್ ಪಕ್ಷದಲ್ಲಿ ಎದ್ದುಕಾಣುತ್ತಿದೆ. ಶಿವಕುಮಾರ್ ಇದ್ದರೂ ಐಟಿ, ಇಡಿ ಕೇಸ್ ಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಆದಾಗ್ಯೂ, ಈಗಲೂ ಕೂಡಾ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಕುಂದಿಲ್ಲ. ಮರಳಿ ತನ್ನ ನೆಲೆ ಕಂಡುಕೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳುತ್ತಾರೆ. ಮುಂದಿನ ಕೆಲ ತಿಂಗಳು ವರ್ಷಗಳು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಪ್ರಮುಖವಾದ ದಿನಗಳಾಗಿವೆ. ಇಲ್ಲದೆ ಹೋದರೆ ಕರ್ನಾಟಕವೂ ಕೂಡಾ ತಮಿಳುನಾಡು ಅಥವಾ ಉತ್ತರ ಪ್ರದೇಶದಂತಾಗುತ್ತದೆ.
Advertisement