ಆರ್ ಎಸ್‍ಎಸ್‍ಗೆ ಪರ್ಯಾಯವಾಗಿ ಸೇವಾದಳ: ಕಾಂಗ್ರೆಸ್ ನಿಂದ ನೀಲನಕ್ಷೆ ಸಿದ್ಧ

ರಾಷ್ಟ್ರೀಯ ಸ್ವಯಂ ಸೇವಾಸಂಘ(ಆರ್ ಎಸ್ಎಸ್‍)ಗೆ ಪರ್ಯಾಯವಾಗಿ ಸೇವಾದಳವನ್ನು ಬೆಳೆಸಲು ನೀಲ ನಕ್ಷೆ ಸಿದ್ಧವಾಗಿದೆ. ಪ್ರಖರ ರಾಷ್ಟ್ರೀಯತೆಯ ಚಿಂತನೆಗೆ ತದ್ವಿರುದ್ಧವಾಗಿ ಸೇವೆಗೆ ಪ್ರಧಾನ ಆದ್ಯತೆ ನೀಡಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಾಸಂಘ(ಆರ್ ಎಸ್ಎಸ್‍)ಗೆ ಪರ್ಯಾಯವಾಗಿ ಸೇವಾದಳವನ್ನು ಬೆಳೆಸಲು ನೀಲ ನಕ್ಷೆ ಸಿದ್ಧವಾಗಿದೆ. ಪ್ರಖರ ರಾಷ್ಟ್ರೀಯತೆಯ ಚಿಂತನೆಗೆ ತದ್ವಿರುದ್ಧವಾಗಿ ಸೇವೆಗೆ ಪ್ರಧಾನ ಆದ್ಯತೆ ನೀಡಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಟ್ಟಿನಲ್ಲಿ ಸೇವಾ ದಳ ಸಂಘಟನೆಯನ್ನು ಬಲಪಡಿಸಲು ರೂಪರೇಷೆಗಳು ಸದ್ದಿಲ್ಲದೇ ಸಿದ್ಧಗೊಳ್ಳುತ್ತಿದೆ.

ಈಗಾಗಲೇ ದೇಶದ ಒಂದು ಸಾವಿರ ನಗರಗಳಲ್ಲಿ ಪ್ರತಿ ತಿಂಗಳ ಕಡೆಯ ಭಾನುವಾರ ಧ‍್ವಜಾರೋಹಣ ನಡೆಸಿ ದೇಶದ ಬಹುತ್ವದ ಬಗ್ಗೆ ಚರ್ಚೆ ನಡೆಸುವಂತೆ ಈ ಹಿಂದೆ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಸೂಚನೆ ನೀಡಿ, ಸೇವಾದಳದ ಪುನಶ‍್ಚೇತನಕ್ಕೆ ನೀಲನಕ್ಷೆ ರೂಪಿಸಿದ್ದರು.

ರಾಷ್ಟ್ರನಿರ್ಮಾಣ, ದೇಶಸೇವೆ, ಸಂವಿಧಾನ, ಪ್ರಜಾಪ್ರಭುತ್ವ ಈ ಅಂಶಗಳನ್ನೇ ಮುಂದಿಟ್ಟುಕೊಂಡು ಸೇವಾದಳ ಕಾರ್ಯನಿರ್ವಹಿಸಬೇಕು ಎಂಬುದು ರಾಹುಲ್ ಗಾಂಧಿ ಅವರ ಅಭಿಮತವಾಗಿತ್ತು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ರಾಷ್ಟ್ರೀಯತೆ, ನೆಹರು ಅವರ ಆದರ್ಶ, ಜಾತ್ಯಾತೀತತೆ, ಧರ್ಮಸಹಿಷ್ಣುತೆ ಕುರಿತು ದೇಶದ ಜನರಲ್ಲಿ ಅದರಲ್ಲಿಯೂ ಯುವಜನತೆಯಲ್ಲಿ ಪ್ರಚುರ ಪಡಿಸಲು ಸೇವಾದಳ ಕಾರ್ಯಕ್ರಮ ರೂಪಿಸಿದೆ.

ರಾಷ್ಟ್ರೀಯ ಸ್ವಯಂಸೇವಾ ಸಂಘದ ಮುಖವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದ್ದು, ಸಂಘ ಪರಿವಾರದಲ್ಲಿ ವಿವಿಧ 120 ಉಪಶಾಖೆಗಳಿವೆ. ಇವುಗಳೆಲ್ಲವೂ ಪರಿವಾರದ ನಿರ್ದೇಶನದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯನ್ನು ದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿಗೆ ಪರಿವಾರವೇ ಆಧಾರ ಸ್ಥಂಭವಾಗಿದೆ. ಜಾತಿ, ಧರ್ಮ, ಪ್ರಾದೇಶಿಕ, ದೇಶಭಕ್ತಿ ಇವು ಬಿಜೆಪಿ ಹಾಗೂ ಆರ್ ಎಸ್‍ಎಸ್‍ನ ಕಾರ್ಯಸೂಚಿಗಳಾಗಿವೆ. ಆರ್ ಎಸ್ಎಸ್‍ ನ ಕಾರ್ಯಸೂಚಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಸೇವಾದಳ ಇನ್ನು ಮುಂದೆ ಅಖಾಡಕ್ಕೆ ಇಳಿಯಲಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಪ್ರಧಾನ ಸಂಘಟನಾಕಾರ ಲಾಲ್ ಜಿ ಭಾಯಿ ದೇಸಾಯಿ ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿ, ಆರ್‌ಎಸ್ ಎಸ್ ಹಾಗೂ ಬಿಜೆಪಿ ದೇಶದ‌ ದಿಕ್ಕನ್ನೆ ಬದಲಾಯಿಸುತ್ತಿವೆ. ಶಿಕ್ಷಣ, ಉದ್ಯೋಗದ ಬಗ್ಗೆ ಕೇಂದ್ರದ ನಾಯಕರು ಮಾತನಾಡುತ್ತಿಲ್ಲ. ಭಾಷೆ, ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ನೀಚಗಾರರ ಸಂಘಟನೆಯಾಗಿದ್ದು, ದೇಶದ ಸಂವಿಧಾನವನ್ನು ಒಪ್ಪದಿರುವ ದೇಶದ್ರೋಹಿಗಳು ಎಂದು ಟೀಕಿಸಿದರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘದವರ ಬಳಿ ಕೋಲು ಇದ್ದರೆ, ನಮ್ಮ ಬಳಿ ಧ್ವಜವಿದೆ. ಅಂದು ಬಿಳಿಯರ ವಿರುದ್ಧ ಹೋರಾಟ ಮಾಡಿದ್ದೆವು. ಈಗ ದೇಶವನ್ನು ಲೂಟಿಗೈಯುತ್ತಿರುವ ಕಳ್ಳರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

ಸಿದ್ಧಾಂತವೇ ಸೇವಾದಳ ಹಾಗೂ ಕಾಂಗ್ರೆಸ್ ಗೆ ಆಧಾರ. ಆರ್ ಎಸ್‍ಎಸ್‍ ನ 120 ಉಪಶಾಖೆಗಳಲ್ಲಿ ಮಹಿಳೆಯರಿಗಾಗಲೀ, ಹಿಂದುಳಿದ ಸಮುದಾಯಕ್ಕಾಗಲೀ ಮನ್ನಣೆ ಸಿಕ್ಕಿಲ್ಲ. ಆದರೆ ಸೇವಾದಳ ಹಾಗೂ ಪಕ್ಷದಲ್ಲಿ ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ನಮ್ಮ ಸಂಖ್ಯೆ ಕಡಿಮೆ ಇದೆ. ಆದರೆ ಪಕ್ಷ ಸಂಘಟನೆಯಲ್ಲಿ ಸೇವಾದಳ ಹಿಂದೆ ಬಿದ್ದಿಲ್ಲ. ನಂಬರ್ ಗೇಮ್‍ನಲ್ಲಿ ಎರಡು ವರ್ಷದಲ್ಲಿ ಬಹಳ ಗಳಿಕೆಯಾಗಿದೆ. ಇಷ್ಟುದಿನಗಳ ಕಾಲ ಸೇವಾದಳ ಸಕ್ರಿಯವಾಗಿರಲಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಈ ಎರಡು ವರ್ಷದಲ್ಲಿ ಸೇವಾದಳದ ಸಂಘಟನೆ ಹೆಚ್ಚಿದೆ. ಪಕ್ಷಕ್ಕೆ ಬಲತುಂಬುವ ನಿಟ್ಟಿನಲ್ಲಿ ಇನ್ನುಮುಂದೆ ಬೂತ್ ಮಟ್ಟದಲ್ಲೂ ಸೇವಾದಳ ಸಕ್ರಿಯವಾಗಲಿದೆ ಎಂದರು.

ರಾಜ್ಯದ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಸೇವಾದಳ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಲ್ಲಿ ಸೇವಾದಳ ಪಕ್ಷಕ್ಕೆ ಹೆಗಲುಗೊಟ್ಟು ದುಡಿಯಲಿದೆ. ಅನರ್ಹರ ಶಾಸಕರನ್ನು ಬಿಜೆಪಿ ಖರೀದಿಸಿದ್ದು ಎಂಬುದನ್ನು ಮತದಾರರ ಮುಂದಿಡುತ್ತೇವೆ. ಅನರ್ಹರಿಗೆ ಜನಮನ್ನಣೆ ಸಿಗದಂತೆ ಪಕ್ಷ ಸಂಘಟಿಸಲು ಸೇವಾದಳ ಸಿದ್ಧತೆ ನಡೆಸಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com