ಬೆಂಗಳೂರು: ಸುಪ್ರೀಂ ಕೋರ್ಟ್ ನಿಂದ ತಮ್ಮ ಪರವಾಗಿ ತೀರ್ಪು ಸಿಕ್ಕಿ ಬಿಜೆಪಿ ಸರ್ಕಾರದಲ್ಲಿ ತಮಗೊಂದು ಸ್ಥಾನ ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಅನರ್ಹ ಶಾಸಕರಿಗೆ ನಿನ್ನೆ ಉಪ ಚುನಾವಣೆ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸುತ್ತಿದ್ದಂತೆ ಹಿನ್ನಡೆ, ನಿರಾಸೆಯಾಗಿದೆ. ಅನರ್ಹ ಶಾಸಕರ ರಾಜಕೀಯ ಭವಿಷ್ಯಕ್ಕೆ ಮಂಕು ಕವಿದಿದೆ.
ಈ ಮಧ್ಯೆ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮಾಜಿ ಶಾಸಕ ಡಾ ಕೆ ಸುಧಾಕರ್ ನಿನ್ನೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು ತಮ್ಮ ರಾಜಕೀಯ ಭವಿಷ್ಯ ಅಪಾಯದಲ್ಲಿದೆ ಎಂದಿದ್ದಾರೆ.
ಉಪ ಚುನಾವಣೆ ದಿನಾಂಕ ಪ್ರಕಟವಾಗಿದೆ. ನನಗೆ ಬಹಳ ಬೇಸರವಾಗಿದೆ, ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸೋಮವಾರ ನಮ್ಮ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ, ಇದಕ್ಕೆ ಮೊದಲೇ ಇಂದು ಉಪ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಈ ಎಲ್ಲಾ ಬೆಳವಣಿಗೆಗಳು ನಮಗೆ ಹಿನ್ನಡೆಯಾಗಿದೆ. ನಮ್ಮ ರಾಜಕೀಯ ಭವಿಷ್ಯ ಅಪಾಯದಲ್ಲಿದೆ. ನಾನು ಹೇಳುವುದಾದರೆ ಇದೆಲ್ಲವೂ ಯಾರೋ ಸರಿಯಾಗಿ ಯೋಚಿಸಿ ಮಾಡುತ್ತಿರುವ ಕುತಂತ್ರ ಎನಿಸುತ್ತಿದೆ ಎಂದರು.
ಹಾಗಾದರೆ ನೀವು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇಕೆ ಎಂದು ಕೇಳಿದಾಗ, ಅಧ್ಯಕ್ಷನಾಗಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ನನಗನ್ನಿಸಿತು. ನಾನು ಈಗಾಗಲೇ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದೇನೆ. ನನಗೆ ಆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿಯಿಲ್ಲ ಎಂದರು.
ಇದಕ್ಕೆ ಬಿಜೆಪಿ ಪ್ರತಿಕ್ರಿಯೆ ಹೇಗಿದೆ? ಅವರೀಗ ಅಧಿಕಾರದಲ್ಲಿದ್ದಾರೆ. ನಾವು ನಿರೀಕ್ಷೆ ಮಾಡಿದ ರೀತಿಯಲ್ಲಿ ನಮಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಅನರ್ಹ ಶಾಸಕರ ಪಾಲು ಕಡಿಮೆಯಾಗಿದೆ ಎಂದು ಹೇಳಿದರು.
ನಿನ್ನೆ ಸಿಎಂ ಉಪ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಸಿಎಂ ಸುಧಾಕರ್ ಜೊತೆ ಮಾತುಕತೆ ನಡೆಸಿದರು. ಏನೇನು ಚರ್ಚೆಗೆ ಬಂತು ಎಂದು ಕೇಳಿದಾಗ ವಿವರಣೆ ನೀಡಲು ನಿರಾಕರಿಸಿದರು.
ನಿಮ್ಮ ಮುಂದಿರುವ ಆಯ್ಕೆಗಳೇನು ಎಂದು ಕೇಳಿದಾಗ ಕಾನೂನು ಆಯ್ಕೆಗಳನ್ನು ನೋಡುತ್ತಿದ್ದೇವೆ. ನಾವೆಲ್ಲರೂ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಮುಂದೇನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಸುಧಾಕರ್ ಹೇಳಿದರು.
Advertisement