ಗೋಕಾಕ್: ರಮೇಶ್ ಜಾರಕಿಹೊಳಿ ಭ್ರಷ್ಟಾಚಾರಿ ಅಲ್ಲ. ಅವರ ಅಳಿಯಂದಿರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಾಗಿದೆ. ಆಲಿಬಾಬಾ ಮತ್ತು 40 ಜನ ಕಳ್ಳರ ರೀತಿಯಲ್ಲಿ ತಂಡ ಗೋಕಾಕ್ ನಲ್ಲಿ ಸಿದ್ದವಾಗಿದೆ. ಅಳಿಯಂದಿರ ತಪ್ಪು ನಿರ್ಧಾರದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ ಎಂದು ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ಈ ಸ್ಪರ್ಧೆ ಸಹಾಯವಾಗಿದೆ. ಗೋಕಾಕ್ ನಗರ, 71 ಗ್ರಾಮಗಳಲ್ಲಿ ಭ್ರಷ್ಟಾಚಾರದಿಂದ ಮುಕ್ತಿ ಕಾಣಿಸಬೇಕಿದೆ. ನನ್ನ ವಿರುದ್ಧ ರಮೇಶ್ ಜಾರಕಿಹೊಳಿ ಅಥವಾ ಬೇರೆ ಯಾರೇ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದರೂ ತಾವು ಚಿಂತಿಸುವುದಿಲ್ಲ ಎಂದು ಲಖನ್ ಪ್ರತಿ ಸವಾಲು ಹಾಕಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟದಲ್ಲಿ ಅವರಿಗೆ ಉಪಚುನಾವಣೆ ವೇಳೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕ್ಷೇತ್ರದ ಸ್ವಾತಂತ್ರ್ಯಕ್ಕಾಗಿ ನನಗೆ ಮತ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಬಗ್ಗೆ ತಮಗೆ ಇನ್ನೂ ಪ್ರೀತಿ ಇದೆ. ಆದರೆ ಅವರ ಅಳಿಯ ಅಂಬಿರಾವ್ ನನ್ನ ಪ್ರತಿಸ್ಪರ್ಧಿ ಎಂದು ಭಾವಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಅಂಬಿರಾವ್, ನಗರಸಭೆ ಸದಸ್ಯರಾಗಿದ್ದು, ಕ್ಷೇತ್ರದಲ್ಲಿ ಜನರನ್ನು ಭಯದ ವಾತಾವರಣದಲ್ಲಿ ಇಟ್ಟಿದ್ದಾರೆ. ನಾನು ಮತ್ತು ರಮೇಶ್ ಜಾರಕಿಹೊಳಿ ಎಡಗೈ ಮತ್ತು ಬಲಗೈ ರೀತಿ ಇದ್ದೆವು . ಭ್ರಷ್ಟಾಚಾರ ಮೀತಿ ಮೀರಿದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಮೇಶ್ ಜಾರಕಿಹೊಳಿ ವಿರುದ್ಧ ನಾನು ಯಾವುದೇ ಆರೋಪ ಮಾಡಿಲ್ಲ ಎಂದು ಲಖನ್ ಸ್ಪಷ್ಟಪಡಿಸಿದ್ದಾರೆ.
Advertisement