ಶಿವಮೊಗ್ಗ: ಯಾರೇ ಆಗಲೀ ಸಂಘಟನೆ ಮೀರಿದರೇ ಅವರೇ ನಾಶವಾಗುತ್ತಾರೆ, ವಿನಃ ಸಂಘಟನೆಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಳಗೆ ಬಿದ್ದಿದ್ದಾರೆಂದು ನಾನೋಂದು ಕಲ್ಲು ಹೊಡಿಯುವುದಿಲ್ಲ. ಯಾರಿಗೂ ಅಧಿಕಾರ ಮತ್ತು ಸ್ಥಾನಮಾನ ಶಾಶ್ವತವಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಅಥವಾ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಯಾಗಿದ್ದಾಗ ಪಕ್ಷದೊಂದಿಗೆ ಇದ್ದ ಅವರ ಸಂಬಂಧ ಹೇಗಿತ್ತು ಎಂಬುದು ಈಗ ಅರ್ಥವಾಗುತ್ತಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸಿಕೊಂಡು ಅಧಿಕಾರ ನಡೆಸಿದ್ದರು. ಹೀಗಾಗಿ ಕುತಂತ್ರ ರಾಜಕಾರಣವೇ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣವಾಗಿ ಸರ್ಕಾರವೇ ಬಿದ್ದೋಯ್ತು ಎಂದು ಕುಟುಕಿದರು.
ಇದು ಕೇವಲ ಸಿದ್ದರಾಮಯ್ಯನವರಿಗೆ ಮಾತ್ರ ಪಾಠ ಅಲ್ಲ. ಎಲ್ಲರಿಗೂ ಒಂದು ಪಾಠವಾಗುತ್ತದೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲ ಇಲ್ಲದೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಉದ್ಧಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ಅವರೇ ನಾಶವಾಗ್ತಾರೆ. ವಿನಃ ಸಂಘಟನೆಯಲ್ಲ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ಅವರಿಗೂ ಟಾಂಗ್ ನೀಡಿದ್ದಾರೆ.
Advertisement