'ಪಿಎಂ ಕೇರ್ ಫಂಡ್'ಗೆ ರಾಜ್ಯದ ಸಂಸದರ ದೇಣಿಗೆ: ಇದೆಂತಹ ಗುಲಾಮಗಿರಿ- ಸಿದ್ದರಾಮಯ್ಯ ಕಿಡಿ

ಸಂಸತ್ ಸದಸ್ಯರ ಸ್ವಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದಲೇ 'ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿರುವುದು. ಈಗ ಈ ನಿಧಿಯ ಹಣವನ್ನು ಬಿಜೆಪಿ ಸಂಸದರು 'ಪಿಎಂ ಕೇರ್ ಫಂಡ್' ಗೆ ನೀಡಿರುವುದು....
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸಂಸತ್ ಸದಸ್ಯರ ಸ್ವಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದಲೇ 'ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿರುವುದು. ಈಗ ಈ ನಿಧಿಯ ಹಣವನ್ನು ಬಿಜೆಪಿ ಸಂಸದರು 'ಪಿಎಂ ಕೇರ್ ಫಂಡ್' ಗೆ ನೀಡಿರುವುದು ನಿಯಮಬಾಹಿರ ಮಾತ್ರವಲ್ಲ ಸ್ವಕ್ಷೇತ್ರದ ಮತದಾರರಿಗೆ ಮಾಡಿರುವ ಅನ್ಯಾಯ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಸಂಸದರು ಎಂಪಿಲ್ಯಾಡ್ ನಿಂದ 1 ಕೋಟಿ ಮತ್ತು ಸಂಬಳದ 1 ಲಕ್ಷ ರೂಪಾಯಿ 'ಪಿಎಂ ಕೇರ್ ಫಂಡ್' ಗೆ ನೀಡಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿರುವ ಸೂಚನೆಯೇ ಬೇಜವಾಬ್ದಾರಿತನದ್ದು. ಮುಖ್ಯಮಂತ್ರಿ‌ ಪರಿಹಾರ ನಿಧಿಗೆ ದುಡ್ಡು ಕೊಡಬೇಕಾಗಿರುವುದು ಪ್ರತಿಯೊಬ್ಬ ಸಂಸದನ ಜವಾಬ್ದಾರಿ. ಕೊರೋನಾ ಸೋಂಕು ಯಾವುದೇ ಒಂದು ರಾಜ್ಯಕ್ಕೆ ಇಲ್ಲವೇ ಪ್ರದೇಶಕ್ಕೆ ಸೀಮಿತವಾದದುಲ್ಲ. ಪ್ರತಿಯೊಂದು ರಾಜ್ಯವೂ ಕಷ್ಟದಲ್ಲಿದೆ. ಹೀಗಿರುವಾಗ‌ ಎಂಪಿ ಲ್ಯಾಡ್ ದುಡ್ಡನ್ನು‌ ಜಿಲ್ಲಾಧಿಕಾರಿಗಳಿಗೆ ನೀಡಿ ಸ್ಥಳೀಯವಾಗಿ ಖರ್ಚು ಮಾಡುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮದೇ ತೆರಿಗೆ ಹಣದಲ್ಲಿ ನ್ಯಾಯಯುತ ಪಾಲು ನೀಡದೆ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಪ್ರಧಾನಿ ಮೋದಿ ರಾಜ್ಯದಲ್ಲಿ ಖರ್ಚಾಗಬೇಕಾಗಿದ್ದ ಹಣವನ್ನು ಕೂಡಾ ಕೇಂದ್ರಕ್ಕೆ ತರಿಸಿಕೊಂಡು ಮತ್ತೆ ಕರ್ನಾಟಕ ದೆಹಲಿ‌ ದೊರೆಗಳ ಎದುರು‌ ಕೈಯೊಡ್ಡಿ ನಿಲ್ಲುವಂತೆ ಮಾಡಿದೆ. ಕರ್ನಾಟಕದ ಶಾಸಕರು ತಮ್ಮ ಒಂದು ತಿಂಗಳ‌ ಸಂಬಳವನ್ನು ಪಿಎಂ ಕೇರ್ ಫಂಡ್ ಗೆ ಕೊಡಬೇಕಂತೆ. ಇಲ್ಲಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೋನಾ ನಿಯಂತ್ರಣಕ್ಕಾಗಿ ದೇಣಿಗೆ ಕೊಡುವಂತೆ ಸಾರ್ವಜನಿಕರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇದೆಂತಹ ವಿಪರ್ಯಾಸ? ಇದೆಂತಹ ಗುಲಾಮಗಿರಿ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ತಮ್ಮ ಟ್ವೀಟ್‌ ಖಾತೆಯಲ್ಲಿ ರಾಜ್ಯದ ಬಿಜೆಪಿ ಸಂಸದರು, ಜೆ.ಪಿ.ನಡ್ಡಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com