ಜನರ ಜೀವದ ಜತೆ ಚೆಲ್ಲಾಟವಾಡಿದರೆ ಸುಮ್ಮನಿರುವುದಿಲ್ಲ: ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ

ಕೊರೋನಾ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವಾರು ತಪ್ಪುಗಳನ್ನು ಮಾಡಿದ್ದು, ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಜನರ ಜೀವನದ ಜತೆ ಚೆಲ್ಲಾಟವಾಡಿದರೆ ಸುಮ್ಮನಿರುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 
ಎಚ್. ಡಿ . ಕುಮಾರಸ್ವಾಮಿ
ಎಚ್. ಡಿ . ಕುಮಾರಸ್ವಾಮಿ

ಬೆಂಗಳೂರು: ಕೊರೋನಾ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಹಲವಾರು ತಪ್ಪುಗಳನ್ನು ಮಾಡಿದ್ದು, ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಜನರ ಜೀವನದ ಜತೆ ಚೆಲ್ಲಾಟವಾಡಿದರೆ ಸುಮ್ಮನಿರುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 

ಪಾದರಾಯನಪುರದಲ್ಲಿ ಪುಂಡಾಟಿಕೆ ನಡೆಸಿ ಕ್ವಾರೆಂಟೈನ್ ಗೆ ಒಳಗಾಗಿರುವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿ ಮತ್ತೆ ಬೆಂಗಳೂರಿಗೆ ಕರೆ ತಂದಿರುವ ಬೆಳವಣಿಗೆ ಬಗ್ಗೆ ಕೆಂಡ ಮಂಡಲವಾಗಿರುವ ಕುಮಾರಸ್ವಾಮಿ, ಸರ್ಕಾರದ ತಪ್ಪುಗಳನ್ನು ಬಹಿರಂಗಪಡಿಸಿಲ್ಲ. ಹಾಗೆಂದ ಮಾತ್ರಕ್ಕೆ ಇದು ನಮ್ಮ ದೌರ್ಬಲ್ಯವಲ್ಲ. ಸರ್ಕಾರ ಇಂತಹ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು. 

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕೆಂಪೇಗೌಡ ಮೆಡಿಕಲ್ ಕಾಲೇಜ್ ಬಳಿ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಜೆಡಿಎಸ್ ಮುಖಂಡ ಕಬಡ್ಡಿ ಬಾಬು ನೇತೃತ್ವದಲ್ಲಿ, ಆನಂದ ಗುರೂಜಿ ಸಮ್ಮುಖದಲ್ಲಿ ಬಡವರು, ಕಾರ್ಮಿಕರು, ಅರ್ಚಕರು, ನಿರ್ಗತಿಕರಿಗೆ ಪಡಿತರ ವಿತರಿಸಿ ಮಾತನಾಡಿದ ಕುಮಾರಸ್ವಾಮಿ, ಇಡೀ ಜಗತ್ತು ಕೊರೋನಾ ವೈರಸ್ ವಿರುದ್ದ ಹೋರಾಟ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೇವೆ. ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಇದನ್ನು ಅರ್ಥಮಾಡಿಕೊಂಡು ಆಡಳಿತ ನಡೆಸಬೇಕು ಎಂದರು. 

ರಾಮನಗರ ಜೈಲಿಗೆ ಕ್ವಾರೆಂಟೈನ್ ನಲ್ಲಿರುವವರನ್ನು ಕರೆದೊಯ್ದ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿ ಹೆದರಿದ್ದಾರೆ. ತಮಗೆ ಬಂದ ಖಚಿತ ಮಾಹಿತಿ ಪ್ರಕಾರ ಸೋಂಕು ಮೂವರಿಗೆ ವ್ಯಾಪಿಸಿದೆ. ಇಂತಹ ಸಂದರ್ಭದಲ್ಲಿ ಸಚಿವರುಗಳು ಉಡಾಫೆಯಿಂದ ಮಾತನಾಡುವುದು ಸರಿಯಲ್ಲ. ಜನರ ಜೀವದ ವಿಚಾರದಲ್ಲಿ ಸರ್ಕಾರ ವೈಜ್ಞಾನಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. 

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರಿಗೆ ನಿಜಕ್ಕೂ ಕಳಕಳಿ ಇದ್ದರೆ ತಮ್ಮ ಕ್ಷೇತ್ರದ ಕೆ.ಸಿ. ಜನರಲ್ ಆಸ್ಪತ್ರೆಗೆ ಇವರನ್ನೆಲ್ಲಾ ದಾಖಲಿಸಬಹುದಿತ್ತು. ಯಾಕೆ ಅವರಿಗೆ ರಾಮನಗರವೇ ಬೇಕಾಯಿತೇ. ಸಚಿವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾತನಾಡುವುದು ಸರಿಯಲ್ಲ ಎಂದರು. 

ಪಾದರಾಯನಪುರದ ಆರೋಪಿಗಳನ್ನು ರಾಮನಗರಕ್ಕೆ ಸ್ಥಳಾಂತರಿಸಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಸರ್ಕಾರ ಮಾಹಿತಿ ನೀಡಿಲ್ಲ. ಕೆಲವರನ್ನು ಕತ್ತಲಲ್ಲಿಟ್ಟಿದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. 

ಇದಕ್ಕೂ ಮುನ್ನ ಮಾತನಾಡಿದ ಕಬ್ಬಡ್ಡಿ ಬಾಬು, ಅರ್ಚಕರು, ಬಡವರು, ನಿರ್ಲಕ್ಷಿತ ಸಮುದಾಯದವರಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಒಟ್ಟು 25 ಸಾವಿರ ಆಹಾರ ಕಿಟ್ ಗಳನ್ನು ವಿತರಿಸುತ್ತಿದ್ದು, ಇದಕ್ಕಾಗಿ ರಾಣೆ ಬೆನ್ನೂರಿನಿಂದ ಅಕ್ಕಿ ತರಿಸಲಾಗಿದೆ ಎಂದರು. 

ಸುಮಾರು 35 ಟನ್ ಅಕ್ಕಿ ಹಾಗೂ 6 ಟನ್ ಬೆಳೆ, ಗೋಧಿ, ಸಕ್ಕರೆ, ಎಣ್ಣೆ ಹಾಗೂ ಉಪ್ಪು ಮತ್ತಿತರ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕತ್ರಿಗುಪ್ಪೆ ಮುನಿರಾಜು, ತ್ಯಾಗರಾಜು, ಸತೀಶ್, ಮುನಿಸ್ವಾಮಿ, ಯೋಗ ಮೂರ್ತಿ, ಕುಮಾರ್ ಮತ್ತಿತರರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com