ಮಂಗಳೂರು: ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನರ್ರಚನೆಯಾಗುವ ನಿರೀಕ್ಷೆ ಇದ್ದು ಇದಾಗಲೇ ಅನೇಕರು ಮಂತ್ರಿಗಿರಿಗಾಗಿ ಲಾಬಿ ನಡೆಸಿದ್ದಾರೆ. ಈ ಮಧ್ಯೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಇದ್ದಕ್ಕಿದ್ದಂತೆ ದೆಹಲಿಗೆ ತೆರಳಿದ್ದಾರೆ.
ಕರಾವಳಿ ಭಾಗದ ಶಾಸಕರಾದ ಕಾರ್ಕಳದ ಸುನೀಲ್ ಕುಮಾರ್, ಕುಂದಾಪುರದ ಹಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸುಳ್ಯದ ಎಸ್.ಅಂಗರಾ ಅವರುಗಳ ಪೈಕಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಲಾಗಿದೆ. ಆದ್ದರಿಂದ,ಕೋಟ ಶ್ರೀನಿವಾಸ ಪೂಜಾರಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ತರಾತುರಿಯಲ್ಲಿ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೈಂದೂರು ಮೀನುಗಾರಿಕಾ ಬಂದರು ಯೋಜನೆ ಸೇರಿದಂತೆ 1,100 ಕೋಟಿ ರೂ. ಮೌಲ್ಯದ ತಮ್ಮ ಇಲಾಖೆಯ ಯೋಜನೆಗಳಿಗೆ ಅನುಮೋದನೆ ಪಡೆಯಲು ಸಚಿವರು ದೆಹಲಿಗೆ ಹೋಗಿದ್ದಾರೆ. ಇದಲ್ಲದೆ, ಅವರು ಸರ್ಕಾರಕ್ಕೆ ಅವರ ಖಾತೆಯ, ಕೆಲಸದ ಮಹತ್ವದ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡುವವರಿದ್ದಾರೆ ಎನ್ನಲಾಗುತ್ತಿದೆ,
ಕೋಟ ಶ್ರೀನಿವಾಸ ಪೂಜಾರಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಲಿದ್ದಾರೆ. ಬುಧವಾರ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಲು ಅವರು ಅಪಾಯಿಂಟ್ಮೆಂಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Advertisement