ಕರ್ನಾಟಕದ ಪುತ್ರರು, ಮಲೆನಾಡಿನ ಮಕ್ಕಳಿಗೆ ದೇಶದ ಅತಿದೊಡ್ಡ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನ!
ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಭದ್ರಾವತಿ ಹುಡುಗ ಬಿ ವಿ ಶ್ರೀನಿವಾಸ್ ನೇಮಕಗೊಂಡಿದ್ದಾರೆ. ಇದೀಗ ದೇಶದ ಅತಿದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ ಯುವ ಘಟಕವನ್ನು ಮಲೆನಾಡು ಭಾಗದ ಇಬ್ಬರು ಯುವಕರು ವಹಿಸಿಕೊಂಡಂತಾಗಿದೆ.
Published: 04th December 2020 08:33 AM | Last Updated: 04th December 2020 12:24 PM | A+A A-

ನಿನ್ನೆ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ಆಹಾರ ನೀಡುತ್ತಿರುವ ಬಿ ವಿ ಶ್ರೀನಿವಾಸ್
ಶಿವಮೊಗ್ಗ: ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಭದ್ರಾವತಿ ಹುಡುಗ ಬಿ ವಿ ಶ್ರೀನಿವಾಸ್ ನೇಮಕಗೊಂಡಿದ್ದಾರೆ. ಇದೀಗ ದೇಶದ ಅತಿದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನ ಯುವ ಘಟಕವನ್ನು ಮಲೆನಾಡು ಭಾಗದ ಇಬ್ಬರು ಯುವಕರು ವಹಿಸಿಕೊಂಡಂತಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಚಿಕ್ಕಮಗಳೂರು ಮೂಲದವರಾಗಿದ್ದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು. ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಶಿವಮೊಗ್ಗದ ಭದ್ರಾವತಿಯವರು. ಇವರು ಭಾರತೀಯ ಯುವ ಕಾಂಗ್ರೆಸ್ ಹುದ್ದೆಯಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ನೇಮಕವಾಗುವ ಮೊದಲೇ ಇದ್ದರು.
ಕಳೆದ ವರ್ಷ ಜುಲೈಯಲ್ಲಿ 38 ವರ್ಷದ ಶ್ರೀನಿವಾಸ್ ಯುವ ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷರಾಗಿ ಕೇಶವ್ ಚಂದ್ ಯಾದವ್ ರಾಜೀನಾಮೆ ಬಳಿಕ ನೇಮಕಗೊಂಡಿದ್ದರು. ಶ್ರೀನಿವಾಸ್ ಅವರ ಕುಟುಂಬ ಅವರು ಚಿಕ್ಕವರಿದ್ದಾಗಲೇ ಬೆಂಗಳೂರಿಗೆ ಶಿಫ್ಟ್ ಆಗಿತ್ತು.
2005ರಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಗೆ ಸೇರ್ಪಡೆಯಾದರು. ನಂತರ ರಾಜಾಜಿನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದರು. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ 2011ರಲ್ಲಿ ನೇಮಕಗೊಂಡರು.
ನಂತರ ಸೋನಿಯಾ ಗಾಂಧಿಯವರು ಭಾರತೀಯ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಹೊಸ ಜವಾಬ್ದಾರಿ ವಹಿಸಿದರು. ಅನೇಕ ರಾಜ್ಯಗಳಲ್ಲಿ ಓಡಾಡಿ ಯುವ ಕಾಂಗ್ರೆಸ್ ನ್ನು ಬಲಪಡಿಸಲು ಯತ್ನಿಸಿದರು. ನಿರುದ್ಯೋಗ ದಿನ ಅಭಿಯಾನವಾದ ರೋಜ್ ಗಾರ್ ದೊ ವನ್ನು ನಡೆಸಿ ಮೋದಿ ಸರ್ಕಾರದ ವಿರುದ್ಧ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಿದರು.
ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶ್ರೀನಿವಾಸ್, ರಾಹುಲ್ ಗಾಂಧಿಯವರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಕರ್ನಾಟಕದಿಂದ ನನಗೇ ಈ ಹುದ್ದೆ ಮ1ದಲ ಸಲ ಸಿಕ್ಕಿದ್ದು. ಈ ಹಿಂದಿನ ಜವಾಬ್ದಾರಿಗಳಲ್ಲಿ ನನ್ನ ಕೆಲಸವನ್ನು ನೋಡಿ ನನ್ನನ್ನು ನೇಮಕ ಮಾಡಿದ್ದಾರೆ. ಯುವ ಶಕ್ತಿಯನ್ನು ಸೆಳೆಯುವ ಉತ್ಸಾಹವಿದೆ ಎಂದು ನನಗೆ ಜವಾಬ್ದಾರಿ ವಹಿಸಿದ್ದು ನನ್ನ ಕರ್ತವ್ಯವನ್ನು, ಅವರ ನಂಬಿಕೆಯನ್ನು ಉಳಿಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸಂಬಂಧಿಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಈ ಹಿಂದೆ 7 ವರ್ಷ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ವಹಿಸಿಕೊಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಡಿಜಿಟಲ್ ಸಂವಹನ ತಂಡದ ನೇತೃತ್ವ ವಹಿಸಿದ್ದರು. 2014ರ ಲೋಕಸಭೆ ಚುನಾವಣೆ ವೇಳೆ ಮೋದಿಯವರ ಪರವಾಗಿ ಪ್ರಚಾರ ಮಾಡಿದ್ದರು.