ಬೆಳಗಾವಿ ಲೋಕಸಭೆ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಯಾರಿಗೆ? ಹೆಬ್ಬಾಳ್ಕರ್ ಅಥವಾ ಜಾರಕಿಹೊಳಿ?
ಬೆಳಗಾವಿ: ಮುಂಬರುವ ಬೆಳಗಾವಿ ಲೋಕಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ.
ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಚಿಂತಿಸಲು ಕಾಲಾವಕಾಶ ಬೇಕೆಂದು ಸತೀಶ್ ಜಾರಕಿ ಹೊಳಿ ಕೇಳಿದ್ದಾರೆಂದು ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.
ಲೋಕಸಭೆ ಉಪ ಚುನಾವಣೆ ಸಂಬಂಧ ಅಭ್ಯರ್ಥಿ ಆಯ್ಕೆಗಾಗಿ ಎಂಬಿ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ನ 11 ಮಂದಿ ಹಿರಿಯ ಸದಸ್ಯರ ತಂಡ ಬೆಂಗಳೂರಿನಲ್ಲಿ ಸಭೆ ಸೇರಿತ್ತು. ಅವರ ಅನುಭವ ಮತ್ತು ಜನಪ್ರಿಯತೆಯಿಂದಾಗಿ ಎಲ್ಲರಿಗೂ ಸತೀಶ್ ಜಾರಕಿಹೊಳಿ ಫೇವರಿಟ್ ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸತೀಶ್ ಸಮರ್ಥರಾಗಿದ್ದಾರೆ, 2000 ನೇ ಇಸವಿಯಲ್ಲಿ ಸತೀಶ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ನಂತರ ಜಾರಕಿ ಹೊಳಿ, ಎರಡು ಬಾರಿ ಎಂಎಲ್ ಸಿ ಮತ್ತು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮೂರು ಬಾರಿಯಿಂದ ಯಮನಕರಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸತೀಶ್ ಜಾರಕಿಹೊಳಿ,ತಮ್ಮ ಕ್ಷೇತ್ರದ ಗ್ರಾಮೀಣಾಭಿವೃದ್ಧಿಗೆ ಹೊಸ ರೂಪ ನೀಡಿದ್ದಾರೆ. ಜೊತೆಗೆ ತಮ್ಮ ತವರು ಗೋಕಾಕ್ ನಲ್ಲಿಯೂ ಉತ್ತಮ ಅಭಿವೃದ್ಧಿ ಕೆಲಸಗಳು ನಡೆದಿವೆ.
ಬಿಜೆಪಿ ಎದುರಿಸಿ ಹೋರಾಡಲು ಸತೀಶ್ ಜಾರಕಿಹೊಳಿ ಸೂಕ್ತ ಅಭ್ಯರ್ಥಿ ಎಂದು ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ, ಕಳೆದ ನಾಲ್ಕು ಬಾರಿ ಸುರೇಶ್ ಅಂಗಡಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಈ ಬಾರಿ ಬಿಜೆಪಿಗೂ ಪ್ರಬಲ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ, ಹೀಗಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇನ್ನೂ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೆಸರು ಕೇಳಿ ಬಂದಿದೆ, ಆಕೆಗಿರುವ ಜನಪ್ರಿಯತೆಯಿಂದ ಗೆಲ್ಲುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಅಭ್ಯರ್ಥಿಯನ್ನು ಫೈನಲ್ ಮಾಡಿ ಅದನ್ನು ಕೆಪಿಸಿಸಿಗೆ ಕಳುಹಿಸಲಿದೆ.