ಬೆಂಗಳೂರು: ಕಾಂಗ್ರೆಸ್ ಎಂಎಲ್ ಸಿ ಸಿ.ಎಂ.ಇಬ್ರಾಹಿಂ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಅವರ ನಿವಾಸಕ್ಕೆ ಭೇಟಿ ನೀಡಿ ಇಬ್ರಾಹಿಂ ಜೊತೆ ಚರ್ಚೆ ಮಾಡಿ ಮತ್ತೆ ಜೆಡಿಎಸ್ಗೆ ವಾಪಸ್ ಬನ್ನಿ ಎಂದು ಆಹ್ವಾನ ಕೊಟ್ಟು
ಬಂದಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ 16 ವರ್ಷಗಳ ಹಿಂದೆ ಇಬ್ರಾಹಿಂ ಜೆಡಿಎಸ್ ತೊರೆದಿದ್ದರು.
ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಸಿಎಂ ಇಬ್ರಾಹಿಂ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ, ಎಸ್ ಆರ್ ಪಾಟೀಲ್ ಅವರಿಂದ ಖಾಲಿಯಾಗುವ ಸ್ಥಾನಕ್ಕೆ ಇಬ್ರಾಹಿಂ ಪಟ್ಟು ಹಿಡಿದಿದ್ದಾರೆ, ಮುಂದಿನ ವರ್ಷ ಇಬ್ರಾಹಿಂ ಅವರ ಆರು ವರ್ಷದ ಅವಧಿ ಮುಕ್ತಾಯಗೊಳ್ಳಲಿದೆ. ಈ ಹುದ್ದೆ ಮೇಲೆ ಇಬ್ರಾಹಿಂ ಆಸಕ್ತಿ ವ್ಯಕ್ತ ಪಡಿಸಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಇದುವರೆಗೂ ಯಾವುದೇ ಭರವಸೆ ನೀಡಿಲ್ಲ.
ಇನ್ನೂ ಇದೇ ಸ್ಥಾನಕ್ಕೆ ಹಿಂದುಳಿದ ವರ್ಗಗಳ ಮುಖಂಡ ಬಿ.ಕೆ ಹರಿಪ್ರಸಾದ್ ಕೂಡ ಮುಂಚೂಣಿಯಲ್ಲಿದ್ದಾರೆ, ಕಾಂಗ್ರೆಸ್ ಮುಸ್ಲಿಮರಿಗೆ ಉನ್ನತ ಸ್ಥಾನ ನೀಡುತ್ತದೆ ಎಂದು ಇಬ್ರಾಹಿಂಗೆ ಭರವಸೆಯಿಲ್ಲ.
ಹೀಗಾಗಿ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಕೇಂದ್ರದ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಪಕ್ಷ ತೊರೆಯದಂತೆ ಮನವಿ ಮಾಡಿಕೊಂಡಿದ್ದರು.
ಅವರೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದವರು, ಇದೊಂದು ಸೌಜನ್ಯದ ಭೇಟಿ ಆಗಿದ್ದಿರಬಹುದು ಇಬ್ರಾಹಿಂ ದೇವೇಗೌಡರ ಮನೆಗೆ ಭೇಟಿ ನೀಡಿದ್ದರ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಸಿಎಂ ಇಬ್ರಾಹಿಂ ದಳ ಪಾಳಯ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕೇಂದ್ರ ಸಚಿವರೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಅವರ ಬಲಗೈ ಬಂಟನಾಗಿದ್ದ ಇಬ್ರಾಹಿಂ ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಜೊತೆಗಿನ ಭಿನ್ನಾಭಿಪ್ರಾಯದಿಂದ ದೂರಗಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲಾ ಸಭೆಗಳಿಗೂ ಇಬ್ರಾಹಿಂ ನಿರಂತರವಾಗಿ ಗೈರಾಗುತ್ತಿದ್ದಾರೆ, 2013 ರಲ್ಲಿ ಇಬ್ರಾಹಿಂ ಅವರಿಗೆ ಭದ್ರಾವತಿ ಯಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು, ಆದರೆ ಅಲ್ಲಿ ಸೋತ ಇಬ್ರಾಹಿಂ ಅವರನ್ನು ಎಂಎಲ್ ಸಿ ಮಾಡಲಾಯಿತು.
Advertisement