ನಾಯಕತ್ವ ಬದಲಾವಣೆ ವಿಚಾರ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಆಪ್ತ: ಆರ್ ಎಸ್ಎಸ್ ಕಚೇರಿ ಹುಡುಕಾಟ

ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸದ್ದಿಲ್ಲದೇ ಬೆಂಗಳೂರಿಗೆ ಭೇಟಿ ನೀಡಿರುವುದು ‌ರಾಜ್ಯ ಬಿಜೆಪಿ ಪಾಳಯ ದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸದ್ದಿಲ್ಲದೇ ಬೆಂಗಳೂರಿಗೆ ಭೇಟಿ ನೀಡಿರುವುದು ‌ರಾಜ್ಯ ಬಿಜೆಪಿ ಪಾಳಯ ದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಂಜೆ ಚಾಮರಾಜ ಪೇಟೆಯಲ್ಲಿರುವ ಆರ್ ಎಸ್ಎಸ್ ಕಚೇರಿ ಕೇಶವಕೃಪಾಕ್ಕೆ ಭೇಟಿ ನೀಡಿದ ಭೂಪೇಂದ್ರ ಯಾದವ್, ಸಂಘದ ನಾಯಕರ ಜೊತೆಗೆ ಸುಧೀರ್ಘ ಸಮಯ ಮಾತುಕತೆ ನಡೆಸಿದ್ದಾರೆ. ರಾಜ್ಯದ ರಾಜಕೀಯದಲ್ಲಿ ಬದ ಲಾವಣೆ, ವಿದ್ಯಾಮಾನಗಳ ಹಿನ್ನೆಲೆಯಲ್ಲಿ ರಹಸ್ಯ ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಿಸೆಂಬರ್ ವೇಳೆಗೆ ಬದಲಾವಣೆಗೆ ಮಾಡುವ ಬಿಜೆಪಿ ವಲಯದ ಮಾತಿಗೆ ಇದು ಪುಷ್ಠಿ ನೀಡಿದಂತಾಗಿದೆ. ಮುಂಬರುವ ರಾಜ್ಯದ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಹಾಗೂ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರ ಹುಡುಕಾಟದಲ್ಲಿರುವ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಗೆ ಮೊದಲ ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ ಎನ್ನಲಾಗಿದೆ.

ಹೀಗಾಗಿ ರಾಜ್ಯಕ್ಕೆ ಅಮಿತ್ ಶಾ ಆಪ್ತರನ್ನು ರವಾನಿಸಿ ಅಗತ್ಯ ಮಾಹಿತಿ, ನಾಯಕತ್ವ ಬದಲಾವಣೆ ಮಾಡಿದರೆ ಎದುರಾಗಬಹುದಾದ ಸಮಸ್ಯೆಗಳು, ಯಾರನ್ನು ಮುಂದಿನ ನಾಯಕರಾಗಿ ಆಯ್ಕೆ ಮಾಡಿದರೆ ಸೂಕ್ತ, ಸದ್ಯದ ರಾಜಕೀಯ ಸ್ಥಿತಿಗತಿಗಳು, ಪರಿಸ್ಥಿಗಳ ಗ್ರೌಂಡ್ ರಿಪೋರ್ಟ್ ಪಡೆದಿದ್ದಾರೆ ಎನ್ನಲಾಗಿದೆ.

ಜೊತೆಗೆ ಸಚಿವ ಸಂಪುಟ ವಿಸ್ತರಣೆ ಗೊಂದಲ ಮುಂದುವರೆದಿರುವುದು, ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದಿರುವುದು, ನಾಯಕತ್ವ ಬದಲಾವಣೆ ಕುರಿತು ಪದೇ ಪದೇ ಕೇಳಿಬರುತ್ತಿರುವ ವದಂತಿಗಳ ಹಿನ್ನಲೆಯಲ್ಲಿ ವಿಸ್ತೃತವಾಗಿ ಆರ್.ಎಸ್.ಎಸ್.ನಾಯಕರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ ಹೈಕಮಾಂಡ್ ಗೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ರಾಷ್ಟ್ರೀಯ ನಾಯಕರು ಯಾರೇ ರಾಜ್ಯಕ್ಕೆ ಆಗಮಿಸಿದರೂ ರಾಜ್ಯ ಬಿಜೆಪಿ ಕಚೇರಿಯಿಂದ ಮಾಹಿತಿ ನೀಡಲಾಗುತ್ತದೆ ಆದರೆ ಈ ಬಾರಿ ಬಿಜೆಪಿ ಕಚೇರಿಗೂ ಮಾಹಿತಿ ನೀಡದೆಯೆ ಭೂಪೇಂದ್ರ ಯಾದವ್ ನಗರಕ್ಕೆ ಆಗಮಿಸಿದ್ದಾರೆ. ಏಕಾಏಕಿ ಕೇಂದ್ರದ ನಾಯಕ ಯಾದವ್ ಭೇಟಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಯಾವ ಸಂದೇಶ ಹೊತ್ತು ಬಂದಿದ್ದಾರೆ. ಯಾವ ಸಂದೇಶವನ್ನು ಹೈಕಮಾಂಡ್ ಗೆ ನೀಡಲಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ.

ಹೈಕಮಾಂಡ್ ಸೂಚನೆ ಮೇರೆಗೆ ರಹಸ್ಯವಾಗಿ ಬೆಂಗಳೂರಿಗೆ ಬಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ಸೀಕ್ರೆಟ್ ಮೀಟಿಂಗ್ ಮಾಡಬೇಕಿದ್ದ ಆರ್.ಎಸ್.ಎಸ್ ಕಚೇರಿಯನ್ನು ಸರಿಯಾಗಿ ಗುರಿತಿಸದೆ ಪರದಾಡಿದ ಸನ್ನಿವೇಶ ನಡೆದಿದೆ.

ನಗರಕ್ಕೆ ಆಗಮಿಸಿದ ಭೂಪೇಂದ್ರ ಯಾದವ್ ಚಾಮರಾಜ ಪೇಟೆಗೆ ಹೋಗಿ ಆರ್.ಎಸ್.ಎಸ್ ಕಚೇರಿ ಕೇಶವಕೃಪಾ ವನ್ನು ಹುಡುಕಾಡಿದ್ದಾರೆ. ಕೇಶವಾಕೃಪಾ ಸಮೀಪವೇ ಹೋಗಿ ಹುಡುಕಾಡಿದ್ದಾರೆ. ಕೇಶವಕೃಪಾ ಸಮೀಪದ ಖಾದಿ ವಸ್ತ್ರಾಲಯ ಗ್ರಾಮೋದ್ಯೋಗ ಭಂಡಾರಕ್ಕೆ ಹೋಗಿ ಬೋರ್ಡ್ ನೋಡುತ್ತಿದ್ದ ಭೂಪೇಂದ್ರ ಯಾದವ್ ಬಳಿಕ ಸ್ಥಳೀಯರನ್ನ ಕೇಳಿ ಪಕ್ಕದ ಕೇಶವಕೃಪಾಗೆ ತೆರಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com