ಬೆಂಗಳೂರು: ಸರ್ಕಾರ ಬೀಳಿಸಿದರೂ ಡಿಕೆ ಶಿವಕುಮಾರ್ ಮೇಲಿನ ಅವರ ಕೋಪ ಮಾತ್ರ ತಣ್ಣಾಗಾಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿ ಡಿಕೆ ಶಿವಕುಮಾರ್ ಅನುಭವಿಸಿದ ಖಾತೆ ಮತ್ತು ಕೊಠಡಿಗಳಿಗೆ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾರ್ ಹಿಂದೆ ಸಚಿವರಾಗಿದ್ದಾಗ ಕಾರ್ಯನಿರ್ವಹಿಸಿದ್ದ ಮೂರನೇ ಮಹಡಿಯ 336 ಸಂಖ್ಯೆಯ ಕೊಠಡಿಯೇ ಬೇಕು ಎಂದು ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿಗೆ ಆ ಕೊಠಡಿ ಸಿಕ್ಕಿಲ್ಲ.
ಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡದಿದ್ದರೂ ಪರವಾಗಿಲ್ಲ, ಪ್ರಬಲ ಖಾತೆಯನ್ನು ನೀಡಬೇಕು ಎಂಬುದು ರಮೇಶ್ ಜಾರಕಿಹೊಳಿ ವಿಧಿಸಿದ ಷರತ್ತು ಆಗಿತ್ತು. ಅದರಲ್ಲಿಯೂ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಕಾರ್ಯನಿರ್ವಹಿಸಿದ್ದ ಇಂಧನ ಖಾತೆಯೇ ಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಇವರ ಈ ಖಾತೆ ಬೇಡಿಕೆ ಬಹುತೇಕ ಈಡೇರುವ ಸಾಧ್ಯತೆ ಇದೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆಯಲ್ಲಿಯೇ ವಿಧಾನಸೌಧಕ್ಕೆ ತೆರಳಿರುವ ನೂತನ ಸಚಿವರು, ಸಿಎಂ ಜೊತೆ ಸಭೆ ನಡೆಸಿದರು. ಈ ವೇಳೆ ತಮಗೆ ಯಾವ ಖಾತೆ ನೀಡಬೇಕು ಹಾಗೂ ಯಾವ ಕೊಠಡಿ ಬೇಕು ಎಂಬ ಬಗ್ಗೆ ಪಟ್ಟಿ ಸಲ್ಲಿಸಿದರು.
ಈ ವೇಳೆ ಗೋಕಾಕ್ ಶಾಸಕ, ವಿಧಾನಸೌಧದ 336-337ನೇ ಕೊಠಡಿ ನೀಡುವಂತೆ ಮನವಿ ಮಾಡಿದ್ದು, ಕೊಠಡಿ ವೀಕ್ಷಣೆ ಮಾಡಿದ್ದಾರೆ. ಕಾರಣ. ಈ ಹಿಂದೆ ಡಿಕೆ ಶಿವಕುಮಾರ್ ಇದ್ದದ್ದು ಇದೇ ಕೊಠಡಿಯಲ್ಲಿ.
ಬೆಳಗಾವಿಯ ಪಿಎನ್ಬಿ ಬ್ಯಾಂಕ್ ಚುನಾವಣೆ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಬೆಂಬಲವಾಗಿ ನಿಂತಿದ್ದ ಡಿಕೆ ಶಿವಕುಮಾರ್ ನಡೆಗೆ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಕನಕಪುರ ಗೌಡರ ಹಸ್ತಕ್ಷೇಪ ಇಲ್ಲಿಗೆ ಬೇಡ ಎಂದು ಎಚ್ಚರಿಕೆ ನೀಡಿದ್ದರು.
ಈ ಘಟನೆ ಬಳಿಕ ಇವರ ನಡುವಿನ ಮುನಿಸು ಬಹಿರಂಗಗೊಂಡಿತು. ಅಲ್ಲದೇ ಸರ್ಕಾರ ಪತನಗೊಳ್ಳಲು ಕಾರಣವಾಯಿತು.
Advertisement