ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ. ದು:ಖದಲ್ಲಿರುವ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ‘ನರೇಂದ್ರ ಮೋದಿಯವರು ಜೀರೋ ಕ್ಯಾಂಡಲ್ ಬಲ್ಬ್ ಇದ್ದಹಾಗೆ, ಬೆಳಕು ನೀಡುವುದಿಲ್ಲ’ ಎಂಬ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿದ ಕಟೀಲ್, ಖರ್ಗೆ ಅವರು ಕತ್ತಲೆಯಲ್ಲಿ ಇದ್ದಾರೆ.
ಅವರನ್ನು ರಾಜಕೀಯವಾಗಿ ಮೇಲೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ರಾಜ್ಯಸಭಾ ಸದಸ್ಯರನ್ನಾಗಿ ಕೂಡ ಆಯ್ಕೆ ಮಾಡಲಿಲ್ಲ. ಮೋದಿ ಸಾವಿರ ವೋಲ್ಟೇಜ್ ಹಾಲೋಜಿನ್ ಬಲ್ಬ್ ಇದ್ದ ಹಾಗೆ. ಜಗತ್ತಿಗೆ ಬೆಳಕು ನೀಡುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರಾಗಲು ಹೈಕಮಾಂಡ್ ಎದುರು ಮಂಡಿಯೂರಿದ್ದಾರೆ. ಕಾಂಗ್ರೆಸ್ ನವರಿಗೆ ಹೋಲಿಸಿಕೊಂಡರೆ ಸಿಎಂ ಯಡಿಯೂರಪ್ಪ ಅವರ ಸ್ಥಿತಿ ಉತ್ತಮವಾಗಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಕಟೀಲ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ನೇಮಕ ಮಾಡಲು ಕಾಂಗ್ರೆಸ್ಗೆ ಇನ್ನೂ ಸಾಧ್ಯವಾಗಿಲ್ಲ. ಮೊದಲು ನಿಮ್ಮ ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ನಂತರ ಮಾತನಾಡಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಮತ್ತೊಂದು ಮುಖ ಜೆಡಿಎಸ್. ಈ ಪಕ್ಷದ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎಂದು ಹೇಳುವುದಿಲ್ಲ.
Advertisement