ಬೆಂಗಳೂರು: ಉದ್ಯೋಗದಲ್ಲಿ ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದ ಜನರಿಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡ ರಾಜ್ಯದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಸರಿ ಇಲ್ಲ. ಇದು ಸಂವಿಧಾನದ ಮೂಲ ಆಶಯಗಳ ವಿರುದ್ಧವಾಗಿದೆ. ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳಿಗೆ ವಿಶೇಷತೆ ಇದೆ. ಹೈಕೋರ್ಟ್ಗಳು ರಾಜ್ಯಗಳಿಗೆ ಸೂಚನೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಜಾತ್ಯತೀತ, ಸಾಮಾಜಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸಂವಿಧಾನದ 16 ಮತ್ತು 16-ಎ ಅನುಚ್ಛೇದಗಳಲ್ಲಿ ಮೀಸಲಾತಿಯನ್ನು ಬದಲಾಯಿಸಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮೀಸಲಾತಿ ಸಹ ಮೂಲಭೂತ ಹಕ್ಕು ಆಗಿದ್ದು, ಇದನ್ನು ಕಾಪಾಡಬೇಕಾದುದು ರಾಜ್ಯ ಸರ್ಕಾರದ ಕೆಲಸ. ಅಮೇರಿಕಾದಲ್ಲಿ ಕರಿಯರಿಗೆ ಮೀಸಲಾತಿ ಇನ್ನೂ ಮುಂದುವರಿಸಲಾಗಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಮೀಸಲಾತಿ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
Advertisement