ಬೆಂಗಳೂರು: ಮಾಜಿ ಸಚಿವ ಡಿಕೆ.ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಭೇಟಿ ಮಾಡಿ, ಮಾತುಕತೆ ನಡೆಸಿದ್ದು, ಇಬ್ಬರೂ ನಾಯಕರ ಭೇಟಿ ಇದೀಗ ಕುತೂಹಲ ಕೆರಳಸಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯ ಚನ್ನಪ್ಪ ಸ್ವಾಮಿ ಮಠದಲ್ಲಿ ಮಾರ್ಚ್5ರಿಂದ ನಡೆಯಲಿರುವ 3 ದಿನಗಳ ಕೃಷಿ ಮೇಳದಲ್ಲಿ ಭಾಗವಹಿಸುವಂತೆ ಡಿಕೆ.ಶಿವಕುಮಾರ್ ಅವರನ್ನು ಆಹ್ವಾನ ಮಾಡಲು ರೇಣುಕಾಚಾರ್ಯ ಆಗಮಿಸಿದ್ದು, ಭೇಟಿ ವೇಳೆ ರೇಣುಕಾಚಾರ್ಯ ಅವರು ಡಿಕೆಶಿ ಜೊತೆಗೆ 15 ನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಿತ್ತಾಟ ಹಾಗೂ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಇಬ್ಬರು ನಾಯರ ಭೇಟಿ ಇದೀಗ ಕುತೂಹಲ ಕೆರಳಿಸಿದೆ.
ಇಬ್ಬರು ನಾಯರ ಭೇಟಿಯಿಂದ ಹರಡುತ್ತಿರುವ ವದಂತಿಗಳಿಗೆ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಹೊನ್ನಾಳಿಯಲ್ಲಿ ಮೂರು ದಿನಗಳ ಕಾಲ ಕೃಷಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೀಗಾಗಿ ಶಿವಕುಮಾರ್ ಅವರಿಗೆ ಆಹ್ವಾನ ಪತ್ರಿಕೆ ನೀಡಲು ಹೋಗಿದ್ದೆ ಎಂದು ಹೇಳಿದ್ದಾರೆ. ಆದರೆ, ಭೇಟಿ ಕುರಿತಂತೆ ಡಿಕೆ.ಶಿವಕುಮಾರ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
Advertisement