ಬೆಂಗಳೂರು: ಕೇವಲ ಒಂದೂವರೆ ತಿಂಗಳಲ್ಲಿ ಕನಿಷ್ಠ ಐದು ಹಿರಿಯ ರಾಜ್ಯ ಬಿಜೆಪಿ ನಾಯಕರು ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಪಾಕಿಸ್ತಾ ಏಜೆಂಟ್ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಯತ್ನಾಳ್ ಕ್ಷಮೆ ಕೇಳುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ಬಗ್ಗೆ ವ್ಯಂಗ್ಯ ಮಾತುಗಳನ್ನಾಡಿರುವ ಯತ್ನಾಳ್ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ಯತ್ನಾಳ್ ವಿರುದ್ಗ ಕ್ರಮ ಕೈಗೊಳ್ಳದಿದ್ದರೇ ಯತ್ನಾಳ್ ನೀಡಿರುವ ಹೇಳಿಕೆ ನಿಮ್ಮದೇ ಅಭಿಪ್ರಾಯವಾಗಿದೆಯೆಂದು ನಾವು ಪರಿಗಣಿಸುತ್ತೇವೆ, ನಿಮ್ಮ ನಾಯಕರುಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ, ಎಂದು ಹೇಳಿದ್ದಾರೆ.
ಇನ್ನೂ ಯತ್ನಾಳ್ ನೀಡಿರುವ ಹೇಳಿಕೆಯಿಂದ ಪಕ್ಷದ ನಾಯಕರುಗಳಿಗೆ ಮುಜುಗರ ಉಂಟಾಗಿದ್ದು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಯತ್ನಾಳ್ ಅವರು ಏಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ ಎಂದು ಸಂಸದ ಪಿಸಿ ಮೋಹನ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಇಂತಹ ಹೇಳಿಕೆಗಳು ಕೇವಲ ಪಕ್ಷಕ್ಕೆ ಮಾತ್ರ ಮುಜುಗರ ಉಂಟು ಮಾಡುತ್ತಿಲ್ಲ ರಾಜ್ಯದಜನತೆಗೂ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಮ್ಮ ಅನೇಕ ನಾಯಕರು ಈಗಾಗಲೇ ಮಂತ್ರಿ ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ಪಕ್ಷದೊಳಗಿನ ಬಂಡಾಯ ನಾಯಕರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ,. ಇಂತಹ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳು ಮತ್ತಷ್ಟು ಗೊಂದಲಗಳಿಗೆ ಎಡೆ ಮಾಡಿಕೊಡುತ್ತವೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರಿಗೆ ಇಂತಹ ಹೇಳಿಕೆ ನೀಡದಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಬಿಜೆಪಿ ವಕ್ತಾರ ರವಿಕುಮಾರ್ ಹೇಳಿದ್ದಾರೆ.
ಈ ಹಿಂದೆ ಅಂದರೆ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗುವ ಮುನ್ನ ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೂಡ್ಸೆ ಪರವಾಗಿ ಮಾತನಾಡಿದ್ದರು. ಈ ವೇಲೆ ಕೇಂದ್ರ ಬಿಜೆಪಿ ನಾಯಕರು ಮಧ್ಯ ಪ್ರವೇಶಿಸಿ ಕಟೀಲ್ ಗೆ ಎಚ್ಚರಿಕೆ ನೀಡಿತ್ತು, ಅದಾದ ನಂತರ ಕಟೀಲ್ ತಮ್ಮ ಟ್ಟೀಟ್ ಡಿಲೀಟ್ ಮಾಡಿದ್ದರು.
ನರೇಂದ್ರ ಮೋದಿ ಅವರು ಬಿಹಾರ ಪ್ರವಾಹ ಪೀಡಿತರ ಬಗ್ಗೆ ಮಾತ್ರ ಕಾಳಜಿಯನ್ನು ತೋರಿಸಿದ್ದಾರೆ ಮತ್ತು ರಾಜ್ಯದ ಪ್ರವಾಹ ಪೀಡಿತರ ಬಗ್ಗೆ ಪ್ರಧಾನಿ ಅವರಿಗೆ ಕಾಳಜಿಯಿಲ್ಲ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರಿಗೆ ನೋಟಿಸ್ ನೀಡಲಾಗಿತ್ತು.
Advertisement