'ನಾನು ಎಷ್ಟು ಸಮಯ ಸಚಿವನಾಗಿ ಇರುತ್ತೇನೆಯೋ ಗೊತ್ತಿಲ್ಲ': ಸಚಿವ ಶ್ರೀರಾಮುಲು ಮಾತಿನ ಅರ್ಥವೇನು? 

ತಾನು ಎಷ್ಟು ಕಾಲ ಸಚಿವರಾಗಿ ಇರುತ್ತೇನೆಯೋ ಗೊತ್ತಿಲ್ಲ, ಈ ಮಧ್ಯೆ ಆಶಾ ಕಾರ್ಯಕರ್ತರ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಲು ಸಾಧ್ಯವೊ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿರುವುದು ಅವರನ್ನು ಉಪ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಅಸಮಾಧಾನ ಹೊಗೆಯಾಡುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಸಚಿವ ಶ್ರೀರಾಮುಲು(ಸಂಗ್ರಹ ಚಿತ್ರ)
ಸಚಿವ ಶ್ರೀರಾಮುಲು(ಸಂಗ್ರಹ ಚಿತ್ರ)

ಬೆಂಗಳೂರು: ತಾನು ಎಷ್ಟು ಕಾಲ ಸಚಿವರಾಗಿ ಇರುತ್ತೇನೆಯೋ ಗೊತ್ತಿಲ್ಲ, ಈ ಮಧ್ಯೆ ಆಶಾ ಕಾರ್ಯಕರ್ತರ ಸಮಸ್ಯೆಗಳನ್ನು ಎಷ್ಟರ ಮಟ್ಟಿಗೆ ಬಗೆಹರಿಸಲು ಸಾಧ್ಯವಾಗುತ್ತದೆಯೊ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿರುವುದು ಅವರನ್ನು ಉಪ ಮುಖ್ಯಮಂತ್ರಿ ಮಾಡಲಿಲ್ಲ ಎಂಬ ಅಸಮಾಧಾನ ಹೊಗೆಯಾಡುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.


2018ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ರಾಜ್ಯದ 80 ಕ್ಷೇತ್ರಗಳಲ್ಲಿ ತೀವ್ರ ಪ್ರಚಾರ ನಡೆಸಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅಂದು ಭರವಸೆ ಕೊಟ್ಟಿದ್ದರು. ಆದರೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಒತ್ತಡದಲ್ಲಿ ಸಿಎಂ ಯಡಿಯೂರಪ್ಪ ಇಂದು ಇದ್ದಾರೆ.


ಶ್ರೀರಾಮುಲು ಅವರು ದಾವಣಗೆರೆಯಲ್ಲಿ ಸಹ ಇದೇ ರೀತಿಯ ಹೇಳಿಕೆ ಕೊಟ್ಟಿದ್ದರು. ಜನರು ತಮ್ಮನ್ನು ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವುದನ್ನು ನೋಡಲು ಬಯಸುತ್ತಿದ್ದಾರೆ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ಅವರ ಆಪ್ತ ವಲಯಗಳಲ್ಲಿ ತಮ್ಮ ಅಸಹಾಯಕತೆಯನ್ನು ಶ್ರೀರಾಮುಲು ತೋಡಿಕೊಂಡಿದ್ದಾರಂತೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಹುದ್ದೆ ಕೂಡ ಅವರಿಗೆ ಕೊಟ್ಟಿಲ್ಲ. ಈ ಸಂದರ್ಭದಲ್ಲಿ ಅವರು ಬಂಡಾಯವೇಳುತ್ತಾರೆಯೇ ಎಂದು ಜನ ಕುತೂಹಲದಿಂದ ನೋಡುತ್ತಿದ್ದಾರೆ.

ಶ್ರೀರಾಮುಲು ಅವರು ವಾಲ್ಮೀಕ ನಾಯಕ ಸಮುದಾಯದ ಪ್ರಮುಖ ಮುಖಂಡ. ಬಡವ ಶ್ರಮಿಕ ರೈತ ಪಾರ್ಟಿಯ ಮೂಲಕ ನಾಲ್ವರನ್ನು ಶಾಸಕರನ್ನಾಗಿ  ಗೆಲ್ಲಿಸಿದ್ದರು. ನಂತರ ಕರ್ನಾಟಕ ಜನತಾ ಪಾರ್ಟಿ ಮೂಲಕ ಏಳು ಮಂದಿಯನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಶ್ರೀರಾಮುಲು ಅವರ ರಾಜಕೀಯದ ಪ್ರಮುಖ ಸವಾಲು ರಮೇಶ್ ಜಾರಕಿಹೊಳಿ. ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗುವ ಸಾಧ್ಯತೆಯಿದೆ. ಹೀಗೆ ಆದಲ್ಲಿ ರಾಜಕೀಯವಾಗಿ ಶ್ರೀರಾಮುಲುಗೆ ಮತ್ತಷ್ಟು ಹಿನ್ನಡೆಯಿದೆ. ಹೀಗಿರುವಾಗ ಅವರ ಮುಂದಿನ ನಡೆಯೇನು ಎಂಬ ಕುತೂಹಲವಿದೆ. ಈ ಬಗ್ಗೆ ಅವರಲ್ಲಿ ಪ್ರತಿಕ್ರಿಯೆ ಪಡೆಯೋಣವೆಂದರೆ ಶ್ರೀರಾಮುಲು ಸಂಪರ್ಕಕ್ಕೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com