ಬೆಂಗಳೂರು: ಹಿರಿಯ ನಾಯಕರು ಪಕ್ಷ ತೊರೆದಿದ್ದು, ಹಣ ಹಾಗೂ ಗೆಲ್ಲುವ ಅಭ್ಯರ್ಥಿಗಳ ಕೊರತೆಯಿಂದಾಗಿ ಈ ಬಾರಿಯ ಉಪ ಚುನಾವಣೆಯಲ್ಲಿ ಸೋಲು ಕಾಣಲು ಕಾರಣವಾಯಿತು ಎಂದು ಎಐಸಿಸಿಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಎಐಸಿಸಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಉಪಚುನಾವಣೆ ಫಲಿತಾಂಶ ಕುರಿತು ಮೌಖಿಕ ವರದಿ ನೀಡಿರುವ ಅವರು, ಚುನಾವಣೆಯ ಸೋಲಿಗೆ ಕಾರಣಗಳನ್ನು ತಿಳಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕಾರ್ಯನಿರತರಾಗಿದ್ದು, ಜಿ.ಪರಮೇಶ್ವರ್ ಅವರು ಅನಾರೋಗ್ಯ ಪೀಡಿತರಾಗಿದ್ದಾರೆ. ಬಿಕೆ. ಹರಿಪ್ರಸಾದ್ ಹಾಗೂ ಮುನಿಯಪ್ಪ ಅವರೂ ಕೂಡ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಇದರಂತ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜೊತೆ ಚುನಾವಣಾ ಫಲಿತಾಂಶ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಚುನಾವಣೆ ಬಿಜೆಪಿ ಅಭ್ಯರ್ಥಿಗಳಿಗೆ ರೂ.25-30 ಕೋಟಿ ನೀಡುತ್ತಿತ್ತು. ಈ ವೇಳೆ ಪಕ್ಷ ಆರ್ಥಿಕ ಕೊರತೆ ಸಮಸ್ಯೆ ಎದುರಿಸುತ್ತಿತ್ತು. ನಮ್ಮ ಪಕ್ಷದ ಹಿರಿಯ ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಮ್ಮಲ್ಲಿ ಗೆಲ್ಲುವ ಅಭ್ಯರ್ಥಿಗಳೂ ಕೂಡ ಇರಲಿಲ್ಲ. ಪ್ರಮುಖವಾಗಿ ದೊಡ್ಡ ಹೊಡೆತ ಬಿದ್ದಿದ್ದು, ಪ್ರಚಾರದ ಸಂದರ್ಭದಲ್ಲಿ. ದೊಡ್ಡ ದೊಡ್ಡ ನಾಯಕರು ಮೊದಲಿನಿಂದಲೇ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಮೈತ್ರಿ ಕುರಿತ ಮಾತುಗಳು ಚುನಾವಣೆಯಲ್ಲಿ ಸೋಲು ಕಾಣುವಂತೆ ಮಾಡಿತು ಎಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮೈತ್ರಿ ಸರ್ಕಾರದಿಂದ ಜನರು ಬೇಸತ್ತಿದ್ದರು. ಅಲ್ಲದೆ, ಹಿರಿಯ ನಾಯಕರು ಪಕ್ಷಾಂತರ ಮಾಡಿದ್ದು ಚುನಾವಣೆಯಲ್ಲಿ ಸೋಲು ಕಾಣಲು ಕಾರಣವಾಯಿತು ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
Advertisement