ಬಾಗಲಕೋಟೆಗೆ ಮತ್ತೊಮ್ಮೆ ಒಲಿಯುತ್ತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ?

ಬಹಳ ದಿನಗಳ ಹಗ್ಗ ಜಗ್ಗಾಟದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಕುರಿತು ಆದೇಶ ಹೊರಡಿಸಲಿದೆ.
ಆರ್ ಬಿ ತಿಮ್ಮಾಪುರ್
ಆರ್ ಬಿ ತಿಮ್ಮಾಪುರ್

ಬಾಗಲಕೋಟೆ: ಬಹಳ ದಿನಗಳ ಹಗ್ಗ ಜಗ್ಗಾಟದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಶುಕ್ರವಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನೇಮಕದ ಕುರಿತು ಆದೇಶ ಹೊರಡಿಸಲಿದೆ.

ಕೆಪಿಸಿಸಿ ನೂತನ ಸಾರಥಿ ಬೆನ್ನಲ್ಲೇ ಕಾರ್ಯಾಧ್ಯಕ್ಷರ ನೇಮಕ ಕೂಡ ಆಗಲಿದೆ ಎಂದು ಹೇಳಲಾಗುತ್ತಿದ್ದು, ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಲ್ಲಿ ಕಾರ್ಯಾಧ್ಯಕ್ಷ ಸ್ಥಾನಗಳು ಇತರ ಪ್ರಬಲ ಸಮುದಾಯಗಳಾದ ವೀರಶೈವ-ಲಿಂಗಾಯತ, ವಾಲ್ಮೀಕಿ ಮತ್ತು ಪರಿಶಿಷ್ಟ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾರ್ಯಾಧ್ಯಕ್ಷ ಪಟ್ಟ ಸಿಕ್ಕಲಿವೆ ಎನ್ನುವ ಅಂದಾಜಿದೆ.
ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾದಲ್ಲಿ ಒಬ್ಬರು ಕಾರ್ಯಾಧ್ಯಕ್ಷರು ಬಾಗಲಕೋಟೆ ಜಿಲ್ಲೆಯವರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಿನೇಶ ಗುಂಡೂರಾವ್ ಅಧಿಕಾರಾವಧಿಯಲ್ಲಿ ಎಸ್.ಆರ್.ಪಾಟೀಲ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಇದೀಗ ಅವರು ಮೇಲ್ಮನೆ ಪ್ರತಿಪಕ್ಷ ನಾಯಕರಾಗಿದ್ದಾರೆ.

ಕೆಪಿಸಿಸ ಅಧ್ಯಕ್ಷರಿಗೆ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಅನುಕೂಲವಾಗಲಿ ಎಂದು ಕಾರ್ಯಾಧ್ಯಕ್ಷ ಸ್ಥಾನಗಳ ಜವಾಬ್ದಾರಿಯನ್ನು ಯುವಕರಿಗೆ ವಹಿಸಲು ಪಕ್ಷ ಮುಂದಾದಲ್ಲಿ ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ಮುಂಚೂಣಿ ಮುಖಂಡ ಹಾಗೂ ಮೇಲ್ಮನೆ ಸದಸ್ಯರಾಗಿರುವ ಆರ್.ಬಿ. ತಿಮ್ಮಾಪುರ ಅವರಿಗೂ ಕಾರ್ಯಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಪಕ್ಷದ ಸಂಘಟನೆಯಲ್ಲಿ ಈಗಾಗಲೇ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿರುವ ಆರ್.ಬಿ. ತಿಮ್ಮಾಪುರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಬಲ ದಲಿತ(ಎಡಗೈ) ಸಮುದಾಯಕ್ಕೆ ಸೇರಿದ್ದಾರೆ. ದಲಿತ ಎಡಗೈ ಸಮುದಾಯ ಬಲಗೈ ಸಮುದಾಯಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗಕ್ಕೆ ಸೇರಿದವರಾಗಿದ್ದಾರೆ. ಒಂದೊಮ್ಮೆ ಪಕ್ಷದ ಹಿರಿಯ ಮುಖಂಡ ಜಿ. ಪರಮೇಶ್ವರ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾದಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಅವಕಾಶ ಕಡಿಮೆ. ಯುವಕರಿಗೆ ಮಣೆ ಹಾಕಬೇಕು ಎನ್ನುವ ಮಾತಿಗೆ ಮನ್ನಣೆ ಸಿಕ್ಕು ವಾಲ್ಮೀಕಿ ಸಮುದಾಯಕ್ಕೊಂದು, ಪರಿಶಿಷ್ಠ ಸಮುದಾಯಕ್ಕೊಂದು ಪ್ರತ್ಯೇಕ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಪಕ್ಷ ಮುಂದಾದಲ್ಲಿ ಆರ್.ಬಿ. ತಿಮ್ಮಾಪುರ ಕಾರ್ಯಾಧ್ಯಕ್ಷರಾಗುವುದು ಖಚಿತ ಎನ್ನುವ ಮಾತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಒಬ್ಬರಿಗೆ ಕಾರ್ಯಾಧ್ಯಕ್ಷ ಸ್ಥಾನ ಎನ್ನುವುದಾದಲ್ಲಿ ಬೆಳಗಾವಿ ಜಿಲ್ಲೆಯ ಸತೀಶ ಜಾರಕಿಹೊಳಿ ಮತ್ತು ತಿಮ್ಮಾಪುರ ನಡುವೆ ಪೈಪೋಟಿ ಏರ್ಪಡಲಿದೆ. ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟದ್ದರು ಎನ್ನುವುದು ಬಹಿರಂಗ ಗುಟ್ಟು. ಹಾಗಾಗಿ ಅವರು ಕಾರ್ಯಾಧ್ಯಕ್ಷ ಸ್ಥಾನವನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.

ಕಾರ್ಯಾಧ್ಯಕ್ಷರ ಸ್ಥಾನಕ್ಕಾಗಿ ನಡೆಯಲಿರುವ ಪೈಪೋಟಿಯಲ್ಲಿ ಆರ್.ಬಿ. ತಿಮ್ಮಾಪುರಗೆ ಅವಕಾಶ ಸಿಕ್ಕಲ್ಲಿ ಎರಡನೇ ಬಾರಿಗೆ ಬಾಗಲಕೋಟೆ ಜಿಲ್ಲೆಗೆ ಕಾರ್ಯಾಧ್ಯಕ್ಷ ಸ್ಥಾನದ ಗೌರವ ಲಭ್ಯವಾಗಲಿದೆ. ಈಗಾಗಲೇ ಎಸ್.ಆರ್.ಪಾಟೀಲ ಎರಡನೇ ಬಾರಿಗೆ ಮೇಲ್ಮನೆ ಪ್ರತಿಪಕ್ಷ ನಾಯಕರಾಗಿದ್ದಾರೆ. ಹಾಗೆ ಎರಡನೇ ಬಾರಿಗೆ ಕಾರ್ಯಾಧ್ಯಕ್ಷ ಸ್ಥಾನ ಜಿಲ್ಲೆಗೆ ಸಿಕ್ಕಲ್ಲಿ ಅಚ್ಚರಿ ಪಡಬೇಕಿಲ್ಲ.
-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com