ಮೈಸೂರು: ರಾಜ್ಯದಲ್ಲಿ ಕಳೆದ ವರ್ಷ ಇದೇ ಸಮಯಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದುಬಿದ್ದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಮಾಜಿ ಸಚಿವ, ಸಾಹಿತಿ, ಕವಿ 'ಹಳ್ಳಿ ಹಕ್ಕಿ' ಎ ಎಚ್ ವಿಶ್ವನಾಥ್ ಪಾಲೇ ಅಧಿಕವಾಗಿತ್ತು ಎನ್ನುವುದು ಬಹಿರಂಗ ಸತ್ಯ.
ಕಳೆದ ಬಾರಿ ಮಂತ್ರಿ ಮಂಡಲ ವಿಸ್ತರಣೆ, ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ವಿಶ್ವನಾಥ್ ಅವರು ಅವಕಾಶದಿಂದ ವಂಚಿತರಾಗಿದ್ದರು. ತಾವು ಅಧಿಕಾರಕ್ಕೆ ಬರಲು ಸಹಾಯ ಮಾಡಿದ ವ್ಯಕ್ತಿಯನ್ನು ಯಡಿಯೂರಪ್ಪ ಮರೆತುಬಿಟ್ಟರೇ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದವು. ಅದಕ್ಕೆ ಸರಿಯಾಗಿ ವಿಶ್ವನಾಥ್ ಹುಣುಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತರು. ವಿಶ್ವನಾಥ್ ಅವರ ರಾಜಕೀಯ ಜೀವನ ಮುಗಿದೇ ಹೋಯಿತು ಎಂದು ಮಾತನಾಡಿಕೊಂಡವರು ಅದೆಷ್ಟೋ ಮಂದಿ.
ಆದರೆ ಆ ಮಾತುಗಳೆಲ್ಲವೂ ಇಂದು ಸುಳ್ಳಾಗಿದೆ. ರಾಜಕೀಯದಲ್ಲಿ ಜನಜನಿತವಾಗಿರಬೇಕು, ಸಚಿವನಾಗಬೇಕೆಂಬ ವಿಶ್ವನಾಥ್ ಆಸೆ ಇನ್ನೂ ಜೀವಂತವಾಗಿದೆ. ಸಾಹಿತ್ಯ, ಪೆನ್ನು ಅವರಿಗೆ ವರವಾಗಿದೆ. ನಿನ್ನೆ ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ಬಿಜೆಪಿ ಕಳುಹಿಸಿದ ಪಟ್ಟಿಯಲ್ಲಿ ಸಾಹಿತ್ಯ ಕ್ಷೇತ್ರದಿಂದ ಎಚ್ ವಿಶ್ವನಾಥ್ ಹೆಸರು ಇದೆ. ಇದರಿಂದ ವಿಶ್ವನಾಥ್ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಯಾರು ಏನೇ ಹೇಳಿದ್ದರೂ ಕೂಡ ವಿಶ್ವನಾಥ್ ಗೆ ಯಡಿಯೂರಪ್ಪ ಮೇಲೆ ಕೊನೆ ಕ್ಷಣದವರೆಗೂ ನಂಬಿಕೆಯಿತ್ತು.ಅದನ್ನು ಮುಖ್ಯಮಂತ್ರಿ ಉಳಿಸಿಕೊಂಡಿದ್ದಾರೆ.
ಸಾಹಿತ್ಯದಲ್ಲಿ ಅಪಾರ ಒಲವು, ಆಸಕ್ತಿ, ಜ್ಞಾನ ಇರಿಸಿಕೊಂಡಿರುವ ವಿಶ್ವನಾಥ್ 8 ಪುಸ್ತಕಗಳನ್ನು ಬರೆದಿದ್ದಾರೆ. ಪ್ರಜಾಪ್ರಭುತ್ವ, ದೇಶ ಮತ್ತು ರಾಜ್ಯದ ರಾಜಕೀಯದ ಬಗ್ಗೆ, ಇನ್ನು ಹಲವು ಕಾದಂಬರಿಗಳನ್ನು ಕೂಡ ರಚಿಸಿದ್ದಾರೆ. ತಾವು ಮುಂಬೈಯಲ್ಲಿ ಕಳೆದ ದಿನಗಳ ಬಗ್ಗೆ ಕೂಡ ಬರೆಯುವ ಇಚ್ಛೆ ಹೊಂದಿದ್ದಾರೆ.
ನನ್ನ ಮೇಲೆ ನಂಬಿಕೆಯಿಟ್ಟು ಅವರು ಕೊಟ್ಟ ಮಾತನ್ನು ಉಳಿಸಿಕೊಂಡದ್ದಕ್ಕಾಗಿ ನಾನು ಈ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಮೌಲ್ಯಗಳ ವಿಚಾರ ಬಂದಾಗ ಯಡಿಯೂರಪ್ಪನವರು ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
Advertisement