ಸೋಮವಾರ ಎಂಎಲ್ಸಿಗಳ ಪ್ರಮಾಣ ವಚನ: ಸಚಿವರಾಗಲು ಇನ್ನೂ ಕಾಯಬೇಕು!

ವಿಧಾನಪರಿಷತ್ ಗೆ ನಾಮಾಂಕಿತಗೊಂಡಿರುವ ಐವರು ನಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಇಬ್ಬರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು ಎಂಬುದನ್ನು ಮರೆಯುವಂತಿಲ್ಲ.
ಸಿ ಪಿ ಯೋಗೇಶ್ವರ್
ಸಿ ಪಿ ಯೋಗೇಶ್ವರ್

ಬೆಂಗಳೂರು: ವಿಧಾನಪರಿಷತ್ ಗೆ ನಾಮಾಂಕಿತಗೊಂಡಿರುವ ಐವರು ನಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ ಇಬ್ಬರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರು ಎಂಬುದನ್ನು ಮರೆಯುವಂತಿಲ್ಲ.

ಮಾಜಿ ಸಚಿವ ಮತ್ತು ಒಕ್ಕಲಿಗ ಸಮುದಾಯದ ಮುಖಂಡ ಸಿ ಪಿ ಯೋಗೇಶ್ವರ್ 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಮೊದಲು ಹೆಜ್ಜೆ ಇಟ್ಟವರು. ಅತೃಪ್ತ ಶಾಸಕರನ್ನು ಸೆಳೆದು ಪಕ್ಷದಿಂದ ಹೊರಬರಲು ಪ್ರಮುಖ ಪ್ರೇರಣಕರ್ತರು. ಮುಖ್ಯಮಂತ್ರಿಯಾಗುವ ಹಪಾಹಪಿಯಲ್ಲಿದ್ದ ಬಿ ಎಸ್ ಯಡಿಯೂರಪ್ಪನವರ ಕಿವಿಯಲ್ಲಿ ಸಿಎಂ ಪಟ್ಟದ ಆಸೆ ಹುಟ್ಟಿಸಿ ಆಪರೇಷನ್ ಕಮಲದ ಯೋಚನೆಯನ್ನು ಹುಟ್ಟು ಹಾಕಿದವರು ಇದೇ ಸಿ ಪಿ ಯೋಗೇಶ್ವರ್.

ಇನ್ನು ಕುರುಬ ಸಮುದಾಯದ ಪ್ರಮುಖ ಮುಖಂಡ ಅಡಗೂರು ವಿಶ್ವನಾಥ್ ಅಂದು ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಿದ್ದರು. ಜೆಡಿಎಸ್ ನಲ್ಲಿ ನಾಯಕರ ಕಾರ್ಯವೈಖರಿ, ತಮಗೆ ಸೂಕ್ತ ಸ್ಥಾನಮಾನದ ಕೊರತೆ ಕಂಡಿದ್ದ ಎಚ್ ವಿಶ್ವನಾಥ್ 17 ಮಂದಿ ಶಾಸಕರು ಬಂಡಾಯವೇಳಲು ಪ್ರಮುಖ ಕಾರಣರಾದರು. ಯೋಗೇಶ್ವರ್ ಮತ್ತು ವಿಶ್ವನಾಥ್ ಸಚಿವ ಹುದ್ದೆ ಮೇಲೆ ಕಣ್ಣಿಟ್ಟಿದ್ದರು ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಆದರೆ ನಾಡಿದ್ದು ಸೋಮವಾರ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಸಚಿವ ಹುದ್ದೆ ಸಿಗುವುದಿಲ್ಲ. ಅದಕ್ಕೆ ಇನ್ನೂ ಕಾಯಬೇಕು. ಸಚಿವ ಸಂಪುಟ ವಿಸ್ತರಣೆಗೆ ಅಕ್ಟೋಬರ್ ವರೆಗೆ ಕಾಯಬೇಕಾಗಬಹುದು. ಇದಕ್ಕೆ ಸೆಪ್ಟೆಂಬರ್ ನಲ್ಲಿ ತಯಾರಿ ಆರಂಭವಾಗಬಹುದು.

ಆದರೆ ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆ ಅಷ್ಟು ಸುಲಭವಾಗಿ ನಡೆಯಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಇನ್ನು ಮೂರು ಸಚಿವ ಹುದ್ದೆ ಮಾತ್ರ ಬಾಕಿಯಿದೆ. ಸಂಪುಟ ಪುನರ್ರಚನೆ ಕೂಡ ಆಗಬಹುದು, ಆ ಸಂದರ್ಭದಲ್ಲಿ ಕೆಲವರನ್ನು ಕೈಬಿಡಬಹುದು. ಸಂಪುಟಕ್ಕೆ ಸೇರುವ ಇರಾದೆಯಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಸ್ ಅಂಗಾರ ಈಗಾಗಲೇ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com