ಬೆಂಗಳೂರು: ವಿಧಾನ ಪರಿಷತ್ತಿನಿಂದ ಜೂನ್ ಅಂತ್ಯದೊಳಗೆ ನಿವೃತ್ತಿಯಾಗಲಿರುವ 16 ಮಂದಿ ಸದಸ್ಯರಿಂದ ತೆರವಾಗುವ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷೆಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳ ವರಿಷ್ಠರ ಮೇಲೆ ಒತ್ತಡ ತರುವ ಪ್ರಯತ್ನ ಈಗಾಗಲೇ ಆರಂಭಿಸಿದ್ದಾರೆ.
ಅಲ್ಪ ಸಂಖ್ಯಾತ ಸಮುದಾಯದ ನಾಸಿರ್ ಅಹ್ಮದ್, ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹ್ಮದ್ ಸರಡಗಿ ಈ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿದ್ದ ಜಯಮ್ಮ, ಎನ್.ಎಸ್.ಬೋಸ್ರಾಜು, ಹೆಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು.ಮಲ್ಲಿಕಾರ್ಜುನ, ನಸೀರ್ ಅಹ್ಮದ್ ಹಾಗೂ ಎಂ.ಸಿ.ವೇಣುಗೋಪಾಲ್ ಅವರು ಸಹ ಜೂನ್ 30ರಂದು ನಿವೃತ್ತಿಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷವೂ ಸಾಮಾಜಿಕ ನ್ಯಾಯದ ಮೊರೆ ಹೋಗಿದ್ದು, ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವವರೆಗೂ ಕಾಂಗ್ರೆಸ್ ನಲ್ಲಿ ಎರಡು ಹುದ್ದೆಗಳನ್ನು ಹೊಂದುವ ಅವಕಾಶವಿತ್ತು. ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕೇವಲ ಶಿಪಾರಸು ಮಾಡುತ್ತಾರೆ, ಹೈಕಮಾಂಡ್ ಅಂತಿಮ ನಿರ್ದಾರ ಕೈಗೊಳ್ಳಲಿದೆ.
ರಾಜೀವ್ ಗೌಡ ಮತ್ತು ಬಿಕೆ ಹರಿಪ್ರಸಾದ್ ಅವರ ರಾಜ್ಯಸಭೆ ಸ್ಥಾನಗಳು ಖಾಲಿಯಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ ಹೆಸರು ಸಹ ಕೇಳಿ ಬರುತ್ತಿವೆ. ಹರಿ ಪ್ರಸಾದ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಅವರನ್ನು ಮತ್ತೆ ಮರು ನಾಮಕರಣ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಎಲ್ ಹನುಮಂತಯ್ಯ ರಾಜ್ಯಸಭೆ ಸದಸ್ಯರಾಗಿದ್ದು, ಇವರು ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಒಂದು ವೇಳೆ ರಾಜೀವ್ ಗೌಡ ಮರು ನಾಮಕರಣಗೊಂಡರೆ, ಇಬ್ಬರು ಒಕ್ಕಲಿಗರನ್ನು ಕಾಂಗ್ರೆಸ್ ರಾಜ್ಯಸಭೆಗೆ ಕಳುಹಿಸಿದಂತಾಗುತ್ತದೆ.
ಜೆಡಿಎಸ್ ಕಾಂಗ್ರೆಸ್ ಬೆಂಬಲ ಕೋರುತ್ತಿದೆ. ತಾವೇ ಅಭ್ಯರ್ಥಿಯಾಗುವುದು ಇಲ್ಲವೇ ಕುಪೇಂದ್ರ ರೆಡ್ಡಿ ಅವರನ್ನೇ ಮುಂದುವರಿಸುವುದು ದೇವೇಗೌಡರ ಮುಂದಿನ ನಿರ್ಧಾರದ ಮೇಲೆ ನಿಂತಿದೆ.
Advertisement