ಬಳ್ಳಾರಿ: ಕೊರೋನಾ ಸೋಂಕು ನಿವಾರಣೆ ವಿಚಾರದಲ್ಲಿ ತಾವು ಹಾಗೂ ತಮ್ಮ ಸಚಿವ ಸಹೋದ್ಯೋಗಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಧ್ಯಮಗಳು ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಬೆಂಗಳೂರು ನಗರದಲ್ಲಿ ಸೋಂಕು ನಿಯಂತ್ರಣ ಜವಾಬ್ದಾರಿಯನ್ನು ಡಾ,ಕೆ. ಸುಧಾಕರ್ ನೋಡಿಕೊಳ್ಳುತ್ತಿದ್ದರು. ನಾನು ಇಡೀ ರಾಜ್ಯದ ಜವಾಬ್ದಾರಿ ವಹಿಸಿಕೊಂಡಿದ್ದೇ. ಡಾ. ಸುಧಾಕರ್ ಇದೀಗ ಹೋಂ ಕ್ವಾರೆಂಟೇನ್ ನಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಬೆಂಗಳೂರು ಜವಾಬ್ದಾರಿ ಕೊಟ್ಟಿದ್ದಾರೆ. ಇದರಲ್ಲಿ ಭಿನ್ನಾಭಿಪ್ರಾಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದು, ಎಲ್ಲರೂ ಒಂದು ತಂಡವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಅನೂಕೂಲ ಆಗುತ್ತದೆ. ಇಷ್ಟು ಬಿಟ್ಟರೆ ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಬೆಂಗಳೂರು ಉಸ್ತುವಾರಿ ಕೊಟ್ಟಿರುವ ಬಗ್ಗೆ ತಮಗೇನು ಅಸಮಾಧಾನವಿಲ್ಲ ಆ ಬಗ್ಗೆ ನಾನು ಯಾರ ಬಳಿಯೂ ಅಸಮಾಧಾನ ಹೇಳಿಕೊಂಡಿಲ್ಲ. ನಾನು ರಾಜ್ಯದ 30 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿ ಸೋಂಕು ನಿಯಂತ್ರಣದಲ್ಲಿ ನಿರತನಾಗಿದ್ದೇನೆ. ಈ ಹಿಂದೆ ಸುಧಾಕರ್ ಬೆಂಗಳೂರು ನೋಡಿಕೊಳ್ಳುತ್ತಿದ್ದರು. ಬಳಿಕ ಸುರೇಶ್ ಕುಮಾರ್ ಅವರಿಗೆ ಜವಾಬ್ದಾರಿ ಕೊಡಲಾಗಿತ್ತು ಎಂದರು.
Advertisement