ಬೆಂಗಳೂರು: ತಮ್ಮ ಸಿದ್ಧಾಂತ ಒಪ್ಪಿಲ್ಲ ಅಂದರೆ ಅವರಿಗೆ ದೇಶದ್ರೊಹಿ, ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಸಿಎಎ ಸಂವಿಧಾನ ಭಾಹಿರವಾಗಿದೆ. ದೇಶದಲ್ಲಿ 25,000ಗೂ ಹೆಚ್ಚು ಜಾತಿಗಳಿವೆ. ಇಷ್ಟು ವಿಭಿನ್ನತೆ ಇದ್ದರೂ, ನಮ್ಮ ದೇಶ ಸಶಕ್ತ ವಾಗುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ನಿಂದ ಅಲ್ಲ. ಅದು ಸದೃಢ, ಸಶಕ್ತವಾಗಿರಲು ಕಾರಣ ಸಂವಿಧಾನ. ಆದರೆ ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.
ಸಂವಿಧಾನ ವಿರುದ್ಧ ಮಾತನಾಡಿರುವವರು ಎಲ್ಲರೂ ಒಂದೇ ಸಂಘದಿಂದ ಬಂದಿರುವವರು. ಅನಂತ ಕುಮಾ ರ್ ಹೆಗಡೆ ಸಂವಿಧಾನದ ವಿರುದ್ಧ ಮಾತನಾಡುತ್ತಾರೆ. ಆದರೆ ನನಗೆ ಅನಿಸುವ ಪ್ರಕಾರ ಅದರಲ್ಲಿ ಅವರದ್ದೇನು ತಪ್ಪಿಲ್ಲ.
ಏಕೆಂದರೆ ಹಿಂದಿನಿಂದಲೂ ಕೆಲ ಸಂಘ ಸಂಸ್ಥೆಗಳ ಪ್ರಮುಖರು ಸಂವಿಧಾನ ವಿರುದ್ಧ ಮಾತನಾಡುತ್ತಾ ಬರುತ್ತಿದ್ದಾರೆ. ಸಂವಿಧಾನ ವಿರೋಧಿಸುತ್ತಿರುವವರು ಪ್ರಭಾವಿಗಳು. ಸಂಘಟನೆಗೆ ಸೇರಿದ ಪ್ರಮುಖರಾಗಿದ್ದಾರೆ ಎಂದು ಕಿಡಿ ಕಾರಿದರು.
ಇಂದು ನಾವು ಏನೂ ಮಾತಾಡೋ ಹಾಗೇ ಇಲ್ಲ. ಮಾತಾಡಿದರೆ ಅಸಹನೆ, ಅಡೆತಡೆ ಹಾಕುತ್ತಾರೆ. ಇದೇ ಪರಿಸ್ಥಿತಿ ಇವತ್ತು ದೇಶದಲ್ಲಿರೋದು ಎಂದು ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದೇ ಅನುಮಾನವಾಗಿದೆ. ಕಾಶ್ಮೀರದಲ್ಲಿ ನಾಯಕರು ಅರೆಸ್ಟ್ ಆಗಿದ್ದಾರೆ. ಅಸ್ಸಾಂನಲ್ಲಿ ಹೊರಗಿನವರಿಗೆ ಪ್ರವೇಶ ಇಲ್ಲ. ಸರ್ಕಾರದ ವಿರುದ್ಧ ಸುದ್ದಿ ಬರೆದ ಪತ್ರಕರ್ತರ ಬಂಧನ ಆಗುತ್ತಿದೆ. ಸಂಸತ್, ವಿಧಾನಸಭೆಗಳಲ್ಲಿ ಮಾಧ್ಯಮಗಳನ್ನು ಬಹಿಷ್ಕರಿಸಲಾಗಿದೆ. ಇದು ಪ್ರಜಾಪ್ರಭುತ್ವನಾ? ಹೀಗಾದ್ರೆ ಪ್ರಜಾಪ್ರಭುತ್ವ ಉಳಿಯುತ್ತಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
Advertisement