ಬೆಂಗಳೂರು: ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ನೂತನ ಶಾಸಕ ಶರತ್ ಬಚ್ಚೇಗೌಡ ಅವರು ತಾಯಿಯ ಮುಗುಳುನಗೆ ನೆನೆದು ಭಾವುಕರಾದ ಪ್ರಸಂಗ ವಿಧಾನಸಭೆಯಲ್ಲಿ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
ಸಂವಿಧಾನದಿಂದ ಮಹಿಳಾ ದಿನಾಚರಣೆ ಕಡೆಗೆ ವಾಲಿದ ಅವರು, ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಮುಂದೆ ಬರುತ್ತಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪರಿಶ್ರಮ ಇದೆ ಎಂಬುದು ಹಳೆಯ ಮಾತಾಯ್ತು. ಆದರೆ ಈಗ ಪ್ರತಿಯೊಬ್ಬ ಯಶಸ್ವಿ ಮಹಿಳೆಯರ ಹಿಂದೆ ಪುರುಷನ ಪರಿಶ್ರಮವಿದೆ ಎಂದೂ ತಮ್ಮದೇ ಧಾಟಿಯಲ್ಲಿ ಮಾತನಾಡಿದರು.
ಮೊನ್ನೆ ಮನೆಯಲ್ಲಿ ತಾಯಿ ಊಟ ಬಡಿಸುವಾಗ ಮುಗುಳುನಗೆ ಬೀರುತ್ತಿದ್ದರು. ನಾನು ಏಕೆ ಈ ನಗು ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು, 40 ವರ್ಷದ ಹಿಂದೆ ಮಾವನವರು ವಿಧಾನಸಭೆಯಿಂದ ಮನೆಗೆ ಬಂದಾಗ ಅದೆ ರೀತಿ 25 ವರ್ಷದ ಹಿಂದೆ ನಿನ್ನ ತಂದೆ, ಪತಿ ಬಚ್ಚೇಗೌಡರು ವಿಧಾನಸಭೆಯಿಂದ ಮನೆಗೆ ಬಂದಾಗ ಮುದ್ದೆ ಊಟ ಉಪ್ಪುಸಾರು ಬಡಿಸಿದ್ದೆ. ಈಗ ನೀನು ಕೂಡ ವಿಧಾನಸಭೆಯಿಂದ ಬಂದಿದ್ದೀಯ, ನಿನಗೂ ಉಪ್ಪುಸಾರು ಮುದ್ದೆ ಊಟ ಬಡಿಸುತ್ತಿದ್ದೇನೆ ಎಂದು ಹಳೆಯದನ್ನು ಮೆಲುಕು ಹಾಕಿದಾಗ ಮುಗುಳುನಗೆ ಬಂತು ಎಂದು ತಾಯಿ ಹೇಳಿದ್ದನ್ನು ವಿಧಾಸಭೆಯಲ್ಲಿ ನೆನಪು ಮಾಡಿಕೊಂಡು ಕೆಲ ಕ್ಷಣ ಗದ್ಗಿತರಾದರು. ಬಾವುಕರಾದರು.
ಸದನ ತಲೆದೂಗುವಂತೆ ವಿಷಯ ಮಂಡನೆ ಮಾಡಿದ್ದು ರಾಜಕೀಯ ಅವರ ಪ್ರೌಡಿಮೆಗೆ ಹಿಡಿದ ಕನ್ನಡಿಯಾಗಿತ್ತು. ಕೊನೆಗೆ ಸಭಾಧ್ಯಕ್ಷರೇ ಬಹಳ ಚೆನ್ನಾಗಿ ಮಾತನಾಡಿದಿರಿ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement