ಬೆಂಗಳೂರು: ಕೋವಿಡ್-19 ಬಿಕ್ಕಟ್ಟನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವಕಾಶಕ್ಕೆ ಬಳಸುತ್ತಿರುವಂತೆ ಕಾಣುತ್ತಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಯಶಸ್ಸಿನ ಎಳೆಯನ್ನು ತೆಗೆದುಕೊಂಡು ಕೊರೋನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಹತ್ತಿರವಾಗಲು ಡಿ ಕೆ ಶಿವಕುಮಾರ್ ನೋಡುತ್ತಿದ್ದಾರೆ.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ಕರೆದಿದ್ದ ಡಿ ಕೆ ಶಿವಕುಮಾರ್ ತಮ್ಮ ಪ್ರವಾಸದ ಬಗ್ಗೆ ಉಪನಿಷತ್ ಉದಾಹರಣೆ ನೀಡಿ ವಿವರಿಸಿದರು. ಕರ್ನಾಟಕದಲ್ಲಿ ಪ್ರಬಲ ಮುಖಂಡನಾಗಿ ಹೊರಹೊಮ್ಮಲು ಹವಣಿಸುತ್ತಿರುವ ಡಿಕೆಶಿ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.
ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪ್ರವಾಸ ಮಾಡುತ್ತೇನೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಸಾಯುವ ಮೊದಲು ಏನಾದರೊಂದು ಒಳ್ಳೆ ಕೆಲಸ ಮಾಡು ಎಂದು ಉಪನಿಷತ್ ನಲ್ಲಿ ಹೇಳಲಾಗಿದೆ, ಹೀಗಾಗಿ ಈ ಕೊರೋನಾ ಸಮಯದಲ್ಲಿ ಕಷ್ಟಕ್ಕೊಳಗಾಗಿರುವ ಸಹೋದರ, ಸಹೋದರಿಯರನ್ನು ಭೇಟಿ ಮಾಡುತ್ತೇನೆ. ಅವರ ಸಮಸ್ಯೆಗೆ ಧ್ವನಿಯಾಗಿ ನಿಲ್ಲಲಿದ್ದೇನೆ. ಎಲ್ಲಾ ಜಾತಿ, ಧರ್ಮ, ಸಮುದಾಯ, ವರ್ಗಗಳ ಜನರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳಿದರು.
ಪ್ರವಾಸದ ಬಗ್ಗೆ ಘೋಷಣೆ ಮಾಡಿದ್ದು ಅವರ ತಂಡ ಯಾವ ರೀತಿ ಎಂದು ಇನ್ನೂ ಯೋಜನೆ ಮಾಡಬೇಕಷ್ಟೆ.
ಕಾಂಗ್ರೆಸ್ ಇಂದು ಪ್ರತಿಭಟನೆ: ರಾಜ್ಯ ಸರ್ಕಾರ ಕೊರೋನಾ ಸೋಂಕನ್ನು ನಿಭಾಯಿಸುತ್ತಿರುವ ರೀತಿ, ವಲಸೆ ಕಾರ್ಮಿಕರ ಸಮಸ್ಯೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆ ಸಭೆ ಕರೆದಿದ್ದರು.
ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸಂಬಂಧ ಕಾಂಗ್ರೆಸ್ ಇಂದು ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದೆ.
Advertisement