ಸಿಡಿ ಮಾಡುವುದು, ಮಾಡಿಸುವುದು ನನ್ನ ಸ್ವಭಾವವಲ್ಲ: ಸಚಿವ ನಾರಾಯಣಗೌಡ ತಿರುಗೇಟು

ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರ್ಯಾಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ.
ನಾರಾಯಣ ಗೌಡ
ನಾರಾಯಣ ಗೌಡ

ಬೆಂಗಳೂರು: ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರ್ಯಾಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ. ನನಗೆ ಕೆಲಸ ಮಾಡೋದಷ್ಟೆ ಗೊತ್ತು, ನನಗೆ ಯಾವುದೇ ಭಯ ಇಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ  ನಾರಾಯಣಗೌಡ ಹೇಳಿದ್ದಾರೆ‌.

ವಿಕಾಸ ಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ನಾನು ಶಾಸಕ ಸುರೇಶ್ ಗೌಡ ಅವರ ಸಿಡಿ ಬಿಡುಗಡೆ ಮಾಡುತ್ತೇನೆ, ಸಿಡಿ ಇದೆ ಎಂಬ ವಿಚಾರ ಹೇಳಿಲ್ಲ‌. ಸಿಡಿ ಮಾಡೋದು, ಮಾಡಿಸೋದು ನನ್ನ ಸ್ವಭಾವ ಅಲ್ಲ. ಯಾವತ್ತೂ ಅಂತ ಕೆಲಸ ಮಾಡೋದಿಲ್ಲ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ಮಹಾರಾಷ್ಟ್ರದಲ್ಲೆ ಎಲ್ಲವನ್ನ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಯಾವುದಕ್ಕು ಹೆದರುವ ಜಾಯಮಾನ ನನ್ನದಲ್ಲ. ಜಿಲ್ಲೆಯಲ್ಲಿ ಒಳ್ಳೆ ಕೆಲಸ ಮಾಡಿ, ಸರ್ಕಾರಕ್ಕೂ ಉತ್ತಮ ಹೆಸರು ತರುವುದು ನನ್ನ ಉದ್ದೇಶ ಅಷ್ಟೆ ಎಂದಿದ್ದಾರೆ.

ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದವರು. ಅಂದು ಅವರ್ಯಾರೂ ನನ್ನನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿರಲಿಲ್ಲ‌. ಆದರೂ ನಾನು ಮಾತ್ರ ಈಗ ಅವರೆಲ್ಲರ ಸಹಮತದೊಂದಿಗೇ ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗಲೂ ಜಿಲ್ಲೆಯ ಎಲ್ಲ ಶಾಸಕರು ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ಮಾಧ್ಯಮದ ಎದುರು ಬಂದಾಗ ಮಾತ್ರ ನನ್ನ ಬಗ್ಗೆ ಕಿಡಿಕಾರುತ್ತಾರೆ‌. ಇದಕ್ಕೆ ಏನು ಕಾರಣವೊ ಗೊತ್ತಿಲ್ಲ. ನಾನು ಎಸ್ಕಾಟ್ ನೊಂದಿಗೆ ಓಡಾಡೋದನ್ನ ನೋಡಿ ಬೇಸರವಾಗಿದ್ದಾರೋ ಗೊತ್ತಿಲ್ಲ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನ ಖಾಸಗಿಗೆ ಕೊಡುವ ನಿರ್ಧಾರ ಕೈ ಬಿಡಲಾಗಿದೆ. ಈ ವಿಚಾರವನ್ನ ಸಿಎಂ ಜೊತೆ ಚರ್ಚಿಸಿದ್ದೇನೆ. ಆದರೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರ ಮಾತಾಡಲು ಶಾಸಕರನ್ನ ಸಿಎಂ ಬಳಿ ಕರೆದೊಯ್ಯಬೇಕು ಎಂಬ ಆಶಯ ಅವರಲ್ಲಿತ್ತು. ಸಮಸ್ಯೆ ಇತ್ಯರ್ಥ ಆದಮೇಲೆ ಶಾಸಕರನ್ನ ಸಿಎಂ ಬಳಿ ಯಾಕೆ ಕರೆದೊಯ್ಯಬೇಕು? ಈ ವಿಚಾರಕ್ಕೆ ಮಂಡ್ಯ ಜಿಲ್ಲೆಯ ಶಾಸಕರೆಲ್ಲ ಬೇಸರವಾಗಿದ್ದಾರೋ ಏನೋ ಗೊತ್ತಿಲ್ಲ‌ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. 

ಅಲ್ಲದೆ ಜಿಲ್ಲೆಯಲ್ಲಿ ಸಭೆ ಕರೆದಾಗಲೆಲ್ಲ ಶಾಸಕರೆಲ್ಲರಿಗೂ ಆಹ್ವಾನ ನೀಡುತ್ತೇವೆ. ಆದ್ರೆ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಶಾಸಕರನ್ನ ಕರೆಯೋದು ಕಷ್ಟ. ಮಾರ್ಗಮಧ್ಯೆ ಅಧಿಕಾರಿಗಳನ್ನ ಭೇಟಿಮಾಡಿ ವಿಚಾರಿಸುತ್ತೇನೆ. ಕೊರೋನಾ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೆಲಸ ಮಾಡುತ್ತಿದ್ದೇನೆ. ದಿನದ 24 ಗಂಟೆ ದುಡಿಯುವ ಪ್ರವೃತ್ತಿ ನನ್ನದ್ದು. ಯಾರು ಬೇಕಾದರೂ ಟೀಕೆ ಮಾಡಲಿ. ಅದಕ್ಕೆ ತಲೆಕೆಡಿಸಿಕೊಳ್ಳಲ್ಲ. ಹೆದರೋದು ಇಲ್ಲ ಎಂದು ಸಚಿವ ನಾರಾಯಣಗೌಡ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com