ಬೆಂಗಳೂರು: ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯ ಮತ ಎಣಿಕೆಯನ್ನು ಭಾರತೀಯ ಚುನಾವಣಾ ಆಯೋಗ ನವೆಂಬರ್ 2ರಿಂದ 10ಕ್ಕೆ ಮುಂದೂಡಿದೆ. ಆಗ್ನೇಯ ಪದವೀಧರ, ಕರ್ನಾಟಕ ಪಶ್ಚಿಮ ಪದವೀಧರರು, ಕರ್ನಾಟಕ ಈಶಾನ್ಯ ಶಿಕ್ಷಕರ ಮತ್ತು ಬೆಂಗಳೂರು ಶಿಕ್ಷಕ ಕ್ಷೇತ್ರಗಳಿಗೆ ಮೊನ್ನೆ 28ರಂದು ಚುನಾವಣೆ ಏರ್ಪಟ್ಟಿತ್ತು.
ನಾಳೆ ನವೆಂಬರ್ 2ರಂದು ಮತ ಎಣಿಕೆ ನಡೆಯಬೇಕಾಗಿತ್ತು, ಆದರೆ ಅದನ್ನು ನವೆಂಬರ್ 10 ಬೆಳಗ್ಗೆ 8 ಗಂಟೆಗೆ ಮುಂದೂಡಲಾಗಿದೆ, ಕೊನೆ ಹಂತದಲ್ಲಿ ಮರು ಮತದಾನ ಅಗತ್ಯವಿದ್ದರೆ ನವೆಂಬರ್ 13ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಶಿರಾ ಮತ್ತು ರಾಜ ರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪದವೀಧರ ಕ್ಷೇತ್ರಗಳ ಮತ ಎಣಿಕೆಯನ್ನು ಮುಂದೂಡುವಂತೆ ಕಾಂಗ್ರೆಸ್ ನಿನ್ನೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.
ನವೆಂಬರ್ 10ರಂದು ವಿಧಾನಸಭೆ ಉಪ ಚುನಾವಣೆ ಕ್ಷೇತ್ರಗಳ ಮತ್ತು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
Advertisement