ಬೆಂಗಳೂರು: ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಿಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂದನೆ,ಅಪನಿಂದನೆಗಳಿಂದ ನೊಂದಿರುವ ನಿಮ್ಮ ಮನೆಮಗಳನ್ನು 3ರಂದು ನೀವೆಲ್ಲರೂ ಹುಡಿ ತುಂಬಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ. ನನ್ನ ಜೀವನವನ್ನು ನಿಮ್ಮಸೇವೆಗೆ ಮೀಸಲಿಟ್ಟು ತೀರಿಸುವೆ ಎಂದರು.
ಕಳೆದ 20 ದಿನಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳು ಎಲ್ಲರಿಗೂ ಗೊತ್ತಿದೆ. ನನ್ನ ಹೆಸರು ಚುನಾವಣೆ ಕಣದ ಮುನ್ನಲೆಗೆ ಬಂದ ಕ್ಷಣದಿಂದಲೂ ನಿರಂತರ ವಾಗ್ದಾಳಿಗಳು, ಗದಾಪ್ರಹಾರ ನಡೆಯುತ್ತಲೇ ಇದೆ. ನನ್ನ ಗಂಡನ ಹೆಸರು ಬಳಸಬಾರದು ಅಂತೀರಿ. ನನ್ನ ಮೇಲೆ ಸುಳ್ಳು ಎಫ್ ಐಆರ್ ಹಾಕ್ತೀರಿ ಎಂದರು.
ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ.ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನೀವು ನನ್ನ ಬಗ್ಗೆ ಆಡಿರುವ ಮಾತುಗಳು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ಅಂಥ ಚುಚ್ಚು ಮಾತುಗಳನ್ನು ಆಡಿದ್ದೀರಿ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ..? ಎಂದು ಬಿಜೆಪಿ ಅಭ್ಯರ್ಥಿಯನ್ನು ಕೇಳಿದರು.
ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಇಂಥ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದೀರಿ? ನೊಂದ ಹೆಣ್ಣು ಮಗಳ ಬಗ್ಗೆ ಹೀಗೆ ಮಾತನಾಡುವುದು ಸರಿಯೇ? ಎಂದು ಕುಸುಮಾ ಪ್ರಶ್ನಿಸಿದರು.
Advertisement