ಭವಿಷ್ಯದ ನಾಯಕತ್ವದ ಬಗ್ಗೆ ಬಹಿರಂಗ ಹೇಳಿಕೆ ಬೇಡ: ರಾಜ್ಯ ಕಾಂಗ್ರೆಸಿಗರಿಗೆ ಶಿಸ್ತು ಸಮಿತಿ ಸೂಚನೆ
ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಯಾರು ಮುಖ್ಯಸ್ಥರಾಗುತ್ತಾರೆ ಎಂಬ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕೆಂದು ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನಾಯಕರು ಮತ್ತು ಕಾರ್ಯಕರ್ತರಿಗೆ ಒತ್ತಾಯಿಸಿದೆ.
Published: 09th November 2020 08:06 AM | Last Updated: 09th November 2020 12:14 PM | A+A A-

ಬೆಂಗಳೂರು: ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಯಾರು ಮುಖ್ಯಸ್ಥರಾಗುತ್ತಾರೆ ಎಂಬ ಬಗ್ಗೆಒಬ್ಬೊಬ್ಬ ನಾಯಕರು ಒಂದೊಂದು ಬಗೆಯ ಹೇಳಿಕೆ ನೀಡಿದ್ದ ನಂತರ ಇದೀಗ ಪಕ್ಷದ ಭವಿಷ್ಯದ ರಾಜ್ಯ ನಾಯಕತ್ವದ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕೆಂದು ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನಾಯಕರು ಮತ್ತು ಕಾರ್ಯಕರ್ತರಿಗೆ ಒತ್ತಾಯಿಸಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿರುವ ಹಿನ್ನೆಲೆ ಈ ಸೂಚನೆ ಗಮನ ಸೆಳೆದಿದೆ.. ನಾಯಕತ್ವದ ಸಂಬಂಧಿತ ಪ್ರಶ್ನೆಯನ್ನು ಆ ಪ್ರಶ್ನೆ ಉದ್ಭವಿಸಿದಾಗ ಕೇಳುವುದು ಜಾಣತನ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
"ನವೆಂಬರ್ 5 ರಂದು ನಡೆದ ಸಭೆಯಲ್ಲಿ, ಕೆಪಿಸಿಸಿ ಶಿಸ್ತು ಸಮಿತಿ ಶಾಸಕಾಂಗ ಪಕ್ಷದ ಭವಿಷ್ಯದ ನಾಯಕತ್ವದ ಪ್ರಶ್ನೆಯ ಬಗ್ಗೆ ಪಕ್ಷದ ಮುಖಂಡರು ವ್ಯಕ್ತಪಡಿಸುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಕಳವಳದಿಂದ ಆಲಿಸಿದೆ" ಎಂದು ಸಮಿತಿ ಅಧ್ಯಕ್ಷ ಕೆ ರಹಮಾನ್ ಖಾನ್ ಹೇಳಿದರು. ಪಕ್ಷದ ಒಗ್ಗಟ್ಟಿನ ಹಿತದೃಷ್ಟಿಯಿಂದ ಇಂತಹಹೇಳಿಕೆಗಳಿಂದ ದೂರವಿರಲು ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಸಮಿತಿ ವಿನಂತಿಸಿದೆ ಎಂದು ಅವರು ಹೇಳಿದರು.
"ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮತ್ತು ನಮ್ಮ ರಾಜ್ಯದ ಹಿತದೃಷ್ಟಿಯಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕೆಲಸ ಮಾಡಿದರೆ ಉತ್ತಮ" ಎಂದು ಖಾನ್ ಹೇಳಿದರು. ಮಾಜಿ ಸಚಿವ ಮತ್ತು ಶಾಸಕ ಜಮೀರ್ ಅಹಮದ್ ಖಾನ್ಇತ್ತೀಚೆಗೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರೆ, ಅವರ ಪಕ್ಷದ ಕೆಲವು ಸಹೋದ್ಯೋಗಿಗಳಾದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕಿ ಸೌಮ್ಯಾ ರೆಡ್ಡಿ, ಮತ್ತು ಹನುಮಂತರಯಪ್ಪ ಅವರು ಶಿವಕುಮಾರ್ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ಹೇಳಿದ್ದರು ಯಾವುದೇ ವಿವಾದವನ್ನು ಹುಟ್ಟುಹಾಕಲು ಇಷ್ಟವಿಲ್ಲದ ಶಿವಕುಮಾರ್, “ಮೊದಲು ನಾವು ಅಧಿಕಾರಕ್ಕೆ ಬರಬೇಕು. ಆಗ ಹೈಕಮಾಂಡ್ ಮತ್ತು ಶಾಸಕರು ಇದನ್ನು ನಿರ್ಧರಿಸುತ್ತಾರೆ. ’’ ಎಂದು ಹೇಳಿಕೆ ನೀಡಿದ್ದರು.