ಬೆಂಗಳೂರು: ಸಂಪುಟ ಪುನಾರಚನೆ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಬುಧವಾರ ಶಾಸಕರು ಗುಂಪು ಸಭೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಾಗಿರುವ ರೇಣುಕಾರಾರ್ಯ ಅವರ ನೇತೃತ್ವದಲ್ಲಿ ಈ ಗುಂಪು ಸಭೆ ನಡೆದಿದ್ದು, ಸಭೆಯಲ್ಲಿ ರಾಜು ಗೌಡ, ಪ್ರತಾಪ್ ಗೌಡ ಪಾಟೀಲ್, ಹೆಚ್.ವಿಶ್ವನಾಥ್, ಬೆಳ್ಳಿ ಪ್ರಕಾಶ್, ಪೂರ್ಣಿಮಾ ಅವರು ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್ ಹಾಗೂ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಹಿಂದೆ ಉಪಚುನಾವಣೆಗೂ ಮುನ್ನ ಪ್ರಚಾರದಲ್ಲಿ ಹೇಳಿಕೆ ನೀಡಿದ್ದ ಸಿಎಂ ಯಡಿಯೂರಪ್ಪ ಅವರು, ರಾಜರಾಜೇಶ್ವರಿ ನ ಗರದಲ್ಲಿ ಗೆಲುವು ಸಾಧಿಸಿದ್ದೇ ಆದರೆ, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡವುದಾಗಿ ಹೇಳಿದ್ದರು. ಇದೀಗ ಪಟ್ಟಿಯಲ್ಲಿ ರಾಜುಗೌಡ, ಪೂರ್ಣಿಮಾ, ರೇಣುಕಾಚಾರ್ಯ ಹಾಗೂ ಸಿಪಿ ಯೋಗೇಶ್ವರ್ ಕೂಡ ಇದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಅವರು, ನನಗೆ ಸಚಿವ ಸ್ಥಾನ ಬೇಕಿಲ್ಲ. ನವೆಂಬರ್ 25 ಬಳಿಕ ನಾನು ಮಾತನಾಡುತ್ತೇನೆ. ಬದಲಾವಣೆಗಾಗಿ ಕಾಯುತ್ತಿದ್ದೇನೆಂದು ತಿಳಿಸಿದ್ದಾರೆ.
Advertisement