ಸಂಪುಟ ಕಸರತ್ತು: ಸಚಿವ ಸ್ಥಾನದ ಮೇಲೆ ವಿಜಯಪುರದ 4 ಶಾಸಕರ ಕಣ್ಣು
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುದಿಗಾಲಲ್ಲಿ ನಿಂತಿದ್ದು, ಈ ಬೆಳವಣಿಗೆ ನಡುವಲ್ಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ನಾಲ್ವರು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಆರಂಭಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹಾಗೂ ಬಿಳಾಗಿ ಶಾಸಕ ಮುರುಗೇಶ್ ನಿರಾಣಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರಸ್ತುತ, 34 ಸದಸ್ಯರಿರುವ ಸಂಪುಟದಲ್ಲಿ ಪ್ರಸ್ತುತ ಆರು ಹುದ್ದೆಗಳು ಖಾಲಿ ಇದ್ದು, ಇತ್ತೀಚೆಗೆ ನಾಮನಿರ್ದೇಶಿತ ಎಂಎಲ್ ಸಿಗಳಾದ ಎಂ ಟಿ ಬಿ ನಾಗರಾಜ್, ಆರ್ ಶಂಕರ್ ಮತ್ತು ಎ ಎಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.
ಈ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲಾಗುತ್ತಿದೆ ಎಂಬ ವರದಿಗಳನ್ನು ಶಾಸಕ ನಡಹಳ್ಳಿಯವರು ತಳ್ಳಿಹಾಕಿದ್ದಾರೆ.
“ಪ್ರತಿಯೊಬ್ಬ ರಾಜಕಾರಣಿ ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆಯಾದರೂ ಸಚಿವನಾಗಬೇಕೆಂದು ಕನಸು ಕಾಣುತ್ತಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ನಮಗೆ ಆಶೀರ್ವಾದ ಮಾಡಿದ್ದೇ ಆದರೆ, ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ಇಲ್ಲದೇ ಹೋದರೂ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಕೆಲಸ ಮುಂದುವರೆಯಲಿದೆ. ಸಚಿವ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಲಾಬಿಯನ್ನೂ ನಡೆಸುವುದಿಲ್ಲ ತಮ್ಮ ಸಚಿವ ಸಂಪುಟಕ್ಕೆ ನನ್ನನ್ನು ಸೇರ್ಪಡೆಗೊಳಿಸಿಕೊಳ್ಳಿ ಎಂದು ಎಂದಿಗೂ ಯಡಿಯೂರಪ್ಪ ಅವರ ಬಳಿ ಕೇಳಿಲ್ಲ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.
ನವೆಂಬರ್ 25ರ ಬಳಿಕ ಸಂಪುಟ ವಿಸ್ತರಣೆ ಕುರಿತು ನಾನು ಪ್ರತಿಕ್ರಿಯೆ ನೀಡುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಕೇಳಿತ್ತಿದ್ದೇನೆಂದಿದ್ದಾರೆ.
ಈ ನಡುವೆ ದೊಡ್ಡನಗೌಡ ಪಾಟೀಲ್ ಹಾಗೂ ಮುರುಗೇಶ್ ನಿರಾಣಿಯವರು ತಮಗೆ ಸಂಪುಟದಲ್ಲಿ ಸ್ಥಾನ ಸೇರ್ಪಡೆಗೊಳಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಪಕ್ಷಕ್ಕಾಗಿ ನಮ್ಮ ಕಾರ್ಯ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.