ಉಡುಪಿ: ರಾಜ್ಯದಲ್ಲಿ ಆಡಳಿತ ನಡೆಸಿದ್ದ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಅವರು ಮಾದಕ ದ್ರವ್ಯದ ಹಣದಲ್ಲಿ 5 ವರ್ಷ ಸರ್ಕಾರ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಉಡುಪಿಯಲ್ಲಿ ನಡೆದ ಗ್ರಾಮ ಸ್ವರಾಜ್ ಯೋಜನೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕಟೀಲ್ ಅವರು, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿತ್ತು. ಆಗ ರಾಜ್ಯದಲ್ಲಿ ಕೋಮುಗಲಭೆಗಳಾಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಕೋಮು ಗಲಭೆಗಳು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ಮಾಫಿಯಾಗೆ ಭಾರೀ ಬೆಂಬಲ ನೀಡುತ್ತಿತ್ತು. ಮಾದಕ ದ್ರವ್ಯದಿಂದ ಬರುತ್ತಿದ್ದ ಹಣದಲ್ಲಿ ರಾಜ್ಯದಲ್ಲಿ 5 ವರ್ಷ ಸರ್ಕಾರ ನಡೆಸುತ್ತಿದ್ದರು. ಶಾಸಕರೊಬ್ಬರು ಸರ್ಕಾರವನ್ನು ಪ್ರಶ್ನಿಸಿದ ನಂತರವೂ ಸಿದ್ದರಾಮಯ್ಯ ಅವರು ಡ್ರಗ್ ಮಾಫಿಯಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಯುದ್ಧ ಸಾರಲಾಯಿತು. ಹೀಗಾಗಿಯೇ ಕಾಂಗ್ರೆಸ್ ನಾಯರು ಇದೀಗ ರಾಜ್ಯದಲ್ಲಿ ಸಕ್ರಿಯರಾಗಿಲ್ಲ ಎಂದು ತಿಳಿಸಿದ್ದಾರೆ.
Advertisement