ಬೆಳಗಾವಿ: ಕೇವಲ ಸತ್ಯ ಹರಿಶ್ಚಂದ್ರ, ಪ್ರಾಮಾಣಿಕ ಎಂದು ಹೇಳುವುದಲ್ಲ... ಡಿಕೆ ಶಿವಕುಮಾರ್ ಅವರು ಶಾಸಕನಾಗುವುದಕ್ಕೂ ಮುನ್ನ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸವಾಲು ಹಾಕಿದ್ದಾರೆ.
ಮಂಗಳವಾರ ಬೆಳಗಾವಿಗೆ ಭೇಟಿ ನೀಡಿದ ಪ್ರಹ್ಲಾದ್ ಜೋಶಿಯವರು, ಮೊದಲು ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಅಂಗಡಿ ಕುಟುಂಬಸ್ಥರನ್ನು ಭೇಟಿ ಸಾಂತ್ವನ ಹೇಳಿದರು.
ಬಳಿಕ ಬಿಜೆಪಿ ಕಾರ್ಯಕರ್ತರ ಸಭೆಕ, ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡರು, ಬಳಿಕ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ.ಶಿವಕುಮಾರ್ ಅವರು ತಮ್ಮನ್ನು ತಾವು ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಳ್ಳುವುದಲ್ಲ. ಶಾಸಕನಾಗುವುದಕ್ಕೂ ಮುನ್ನ ಅವರ ಆಸ್ತಿ ಎಷ್ಟಿತ್ತು. ಈಗ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು. ಯಾರದೇ ಮನೆ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ಸಿಬಿಐ 6-8 ತಿಂಗಳು ತಯಾರಿ ನಡೆಸುತ್ತದೆ.
ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮಾಡಿದ್ದನ್ನೇ ಇದೀಗ ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಗಳಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹದಾಯಿ ವಿವಾದ ಕುರಿತು ಮಾತನಾಡಿದ ಅವರು ವಿವಾದ ಬಗೆಹರಿಯುವ ಹಂತದಲ್ಲಿದೆ. ಈಗಾಗಲೇ ಹಸಿರು ನ್ಯಾಯಮಂಡಳಿಯ ತೀರ್ಪಿನ ಅನ್ವಯ, ರಾಜ್ಯದ ನೀರಿನ ಪಾಲನ್ನು ಸಂಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆಗಳನ್ನು ನೀಡಿದ್ದು, ರಾಜ್ಯ ಸರ್ಕಾರ ಕೂಡ ರೂ.500 ಕೋಟಿ ಮೀಸಲಿಟ್ಟಿದೆ. ಯಾವುದೇ ಯೋಜನೆಗೂ ಕೇಂದ್ರ ಪರಿಸರ ಇಲಾಖೆಯ ಅನುಮತಿಯ ಅಗತ್ಯವಿದೆ, ಈಗಾಗಲೇ ರಾಜ್ಯ ಸರ್ಕಾರ ಅನುಮತಿ ನೀಡುವಂತೆ ಮನವಿಯನ್ನೂ ಮಾಡಿಕೊಂಡಿದೆ. ಗೋವಾ ಸರ್ಕಾರ ಯಾವುದೇ ಹೇಳಿಕೆ ನೀಡಲಿ, ಯಾವುದೇ ಕ್ರಮ ಕೈಗೊಳ್ಳಲಿ, ನಾವು ಕಾನೂನಿನ ಪ್ರಕಾರ ನಡೆಯುತ್ತಿದ್ದೇವೆ. ಯೋಜನೆಗಾಗಿ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
Advertisement