ದಾವಣಗೆರೆ: ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸದಂತೆ ತಡೆಯಲು ಬಂಡಾಯ ಅಭ್ಯರ್ಥಿಗಳಾದ ಡಿ.ಟಿ ಶ್ರೀನಿವಾಸ್ ಮತ್ತು ಡಾ. ಹಾಲನೂರು ಎಸ್ ಲೇಪಾಕ್ಷಿ ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಸಂಧಾನಕಾರರನ್ನು ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸಂಧಾನ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಬಂಡಾಯಗಾರರಿಲ್ಲ ಎಂದು ಹೇಳಲಾಗಿದೆ, ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಗೆ ಸಲ್ಲಿಸಿರುವ 15 ನಾಮಪತ್ರಗಳು ಅಂಗೀಕಾರಗೊಂಡಿದ್ದು, ಅಕ್ಟೋಬರ್ 12 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.
ಪಕ್ಷವು ಸಂಧಾನಕ್ಕಾಗಿ ಕೆಲು ಮುಖಂಡರನ್ನು ಕಳುಹಿಸಿತ್ತು. ಆದರೆ ಕ್ಷೇತ್ರದ ಮತದಾರರು ನನ್ನನ್ನು ಬಯಸಿದ್ದಾರೆ, ಜೊತೆಗೆ ನನಗೆ ಗೆಲ್ಲುವ ಭರವಸೆಯಿದೆ ಎಂದು ಬಂಡಾಯ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಹೇಳಿದ್ದಾರೆ.
ನಾನು ನಾಮಪತ್ರ ಸಲ್ಲಿಕೆಗೂ ಮನ್ನ ಸಿಎಂ ಯಡಿಯೂರಪ್ಪ ಮತ್ತು ಹಲವು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೆ, ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ, ಆದರೆ ಆಗ ನನ್ನ ಮನವಿಯನ್ನು ಪರಿಗಣಿಸಲಿಲ್ಲ, ಈಗ ಸಮಯ ಮುಗಿದಿದೆ, ನಾನು ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ, ಒಂದು ವೇಳೆ ಗೆದ್ದರೆ ಮೇಲ್ಮನೆಯಲ್ಲಿ ನಾನು ಬಿಜೆಪಿ ಬೆಂಬಲಿಸುತ್ತೇ ನೆ ಎಂದು ಹೇಳಿದ್ದಾರೆ.
ನನ್ನ ಪತಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ನನಗೆ ಮುಜುಗರ ಉಂಟು ಮಾಡುತ್ತಿದೆ, ಪಕ್ಷದ ಟಿಕೆಟ್ ಗಾಗಿ ನಾವು ಪ್ರಬಲ ಆಕಾಂಕ್ಷಿಗಳಾಗಿದ್ದೆವು, ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನನ್ನ ಪತಿ ಪರಿಷತ್ ನಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹಿರಿಯೂರು ಬಿಜೆಪಿ ಶಾಸಕಿ ಕೆ ಪೂರ್ಣಿಮಾ ಹೇಳಿದ್ದಾರೆ.
ಪಕ್ಷದ ವರಿಷ್ಠರು ಬಂಡಾಯಗಾರರೊಂದಿಗೆ ಚರ್ಚಿಸಲಿದ್ದಾರೆ. ಅವರು ತಮ್ಮ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಭರವಸೆ ವ್ಯಕ್ತ ಪಡಿಸಿದ್ದಾರೆ.
Advertisement