ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಸಚಿವ ಶ್ರೀರಾಮುಲು ಅವರ ಖಾತೆ ಬದಲಾವಣೆ ಮಾಡಿರುವ ಸಿಎಂ ಯಡಿಯೂರಪ್ಪ ಸಮಾಜ ಕಲ್ಯಾಣ ಖಾತೆ ನೀಡಿದ್ದಾರೆ.
ಆದರೆ ತಮಗೆ ಒಂದು ಮಾತು ತಿಳಿಸದೇ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದಕ್ಕೆ ಶ್ರೀರಾಮುಲು ಸಿಎಂ ಮುಂದೆಯೇ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ತಮ್ಮ ಖಾತೆ ಬದಲಾಗುತ್ತದೆ ಎಂದು ಶ್ರೀರಾಮುಲು ಯಾವತ್ತೂ ಎಣಿಸಿರಲಿಲ್ಲ, ಸಂಪುಟ ಪುನಾರಚನೆ ವೇಳೆ ಕೂಡ ತಾವು ಸೇಫ್ ಎಂದೇ ಭಾವಿಸಿದ್ದರು.
ಖಾತೆ ಬದಲಾವಣೆ ನಂತರ ತೀವ್ರ ಅಸಮಾಧಾನಗೊಂಡಿರುವ ಶ್ರೀರಾಮುಲು 2018 ರ ವಿಧಾನಸಭೆ ಚುನಾವಣೆ ವೇಳೆ ತಮ್ಮನ್ನು ಡಿಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಹೀಗಾಗಿ ತಮಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
2008 ರಲ್ಲಿ ನಾನು ಆರೋಗ್ಯ ಇಲಾಖೆ ನಿರ್ವಹಿಸಿದ್ದೆ, ನಾನು ಮೊದಲಿನಿಂದಲೂ ಸಮಾಜ ಕಲ್ಯಾಣ ಇಲಾಖೆ ಬಯಸಿದ್ದೆ, ಹಿಂದುಳಿದ ವರ್ಗಗಳ ಸಮುದಾಯಗಳ ಒಳಿತಿಗಾಗಿ ನಾನು ಕೆಲಸ ಮಾಡಲು ಬಯಸಿದ್ದೇನೆ.
ಡಿಸಿಎಂ ಮಾಡಬೇಕು ಎಂಬುದು ನನ್ನ ಹಳೇಯ ಬೇಡಿಕೆಯಾಗಿದೆ, ಸಮಾಜ ಕಲ್ಯಾಣ ಖಾತೆ ಜೊತೆಗೆ ಡಿಸಿಎಂ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗಿದೆ, ನನಗೆ ತುಂಬಾ ಅನುಭವವಿದೆ, ಜನರ ಬೇಡಿಕೆಯನ್ನು ಈಡೇರಿಸುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಶ್ರೀರಾಮುಲು ಅವರು ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ವಾಲ್ಮೀಕಿ ಸಮುದಾಯದ ಸಂಖ್ಯೆ ಅಧಿಕವಾಗಿದೆ, ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯದ 60 ಲಕ್ಷ ಮಂದಿ ತಮ್ಮನ್ನು ಡಿಸಿಎಂ ಮಾಡಬೇಕು ಎಂದು ಬಯಸಿದ್ದಾರೆ ಎಂದು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಶ್ರೀರಾಮುಲು ತಿಳಿಸಿದ್ದರು.
Advertisement