ರಂಗೇರಿದ ಶಿರಾ ಉಪಚುನಾವಣಾ ಕಣ: ಟಿಬಿ ಜಯಚಂದ್ರ ಪರ ಡಿಕೆಶಿ ಪ್ರಚಾರ; ಅಮ್ಮಾಜಮ್ಮ ರೋಡ್ ಶೋ

ಶಿರಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.
ಶಿವಕುಮಾರ್ ಪ್ರಚಾರ
ಶಿವಕುಮಾರ್ ಪ್ರಚಾರ

ತುಮಕೂರು: ಶಿರಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪ್ರಾಬಲ್ಯವಿರುವ ಕಳ್ಳಂಬೆಳ್ಳ ಹೋಬಳಿಯ 13 ಗ್ರಾಮಗಳಲ್ಲಿ ಶಿವಕುಮಾರ್ ಮತಯಾಚಿಸಿದರು. ಉಪ ಚುನಾವಣೆಯ ಫಲಿತಾಂಶದಿಂದ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಬೀಳುವುದಿಲ್ಲ. ಆದರೆ, ಶಿರಾ ಕ್ಷೇತ್ರದ ಜನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶ ರವಾನಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಳ್ಳಿ ಜನರ ಆಶೀರ್ವಾದ ಬಹಳ ಮುಖ್ಯ. ಟಿ.ಬಿ.ಜಯಚಂದ್ರ ಹಾಗೂ ಕಾಂಗ್ರೆಸ್ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಿಮಗೆ ಕೊರೋನಾ ಸಮಯದಲ್ಲಿ ಹಿಂದೆ ಸಿದ್ದರಾಮಯ್ಯನವರು ಕೊಟ್ಟ ಅನ್ನಭಾಗ್ಯದ ಅಕ್ಕಿ ಬಿಟ್ಟರೆ ಬೇರೇನಾದರೂ ಬಂತಾ? ನಿಮಗೆ ಪರಿಹಾರ ಮೊತ್ತ ಬಂತಾ? ಸವಿತಾ ಸಮಾಜ, ಚಾಲಕರು, ರೈತರಿಗೆ ಸಹಾಯ ಆಯ್ತಾ?  ವಿದ್ಯಾರ್ಥಿಗಳು, ಅವರ ಪೋಷಕರ ಗೋಳನ್ನು ಯಾರಾದರೂ ಕೇಳಿದ್ದಾರಾ? ಯಾವುದೂ ಇಲ್ಲ ಎಂದ ಮೇಲೆ ಈ ಸರ್ಕಾರ ಯಾಕಿರಬೇಕು? ಎಂದು ಜನರನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಬಿ.ವೈ.ವಿಜಯೇಂದ್ರ, ಎಚ್‌.ಡಿ.ಕುಮಾರಸ್ವಾಮಿ ಅವರು ಇಲ್ಲಿ ಬಂದು ಯಾಕೆ ಮತ ಕೇಳುತ್ತಿದ್ದಾರೆ..? ಪಕ್ಷದ ಗುರುತಿನ ಹಸ್ತ ನಮ್ಮದಷ್ಟೇ ಅಲ್ಲ, ಅದು ನಿಮ್ಮದು ಕೂಡ. ಜಯಚಂದ್ರ ಅವರನ್ನು ಹಾರೈಸಿ ಶಿರಾ ಕ್ಷೇತ್ರದ ಜನರು ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ರವಾನಿಸಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಿಮ್ಮ ಅಪಾರ ಸೇವೆ ಮಾಡಲಿದೆ ಎಂದು ಹೇಳಿದರು.

ಈ ಚುನಾವಣೆಯಿಂದ ಯಡಿಯೂರಪ್ಪನವರೂ ಕೆಳಗೆ ಇಳಿಯುವುದಿಲ್ಲ, ಮೋದಿಯವರೂ ಇಳಿಯುವುದಿಲ್ಲ. ನಾವ್ಯಾರು ಸತ್ಯನಾರಾಯಣ ಅವರಿಗೆ ಕೆಟ್ಟದ್ದು ಬಯಸಿರಲಿಲ್ಲ. ಅವರ ಧರ್ಮಪತ್ನಿಯವರ ಮೇಲೆ ನಮಗೆ ಯಾವುದೇ ದ್ವೇಷ ಇಲ್ಲ. ಅವರನ್ನು ನಾವು ಗೌರವಿಸುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಪರ ಮಾತನಾಡಲು ಶಕ್ತಿ ಇಲ್ಲ. ಆ ಶಕ್ತಿ ಇರೋದು ಜಯಚಂದ್ರ ಅವರಿಗೆ ಮಾತ್ರ ಎಂದರು.

ಇನ್ನು ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಇಂದು ಮೊದಲ ಬಾರಿಗೆ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕೂಡ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com