ಬೆಂಗಳೂರು: ಕುಂದಗೋಳದ ಜೆಡಿಎಸ್ ನ ಮಾಜಿ ಶಾಸಕ ಎಂ.ಎಸ್.ಅಕ್ಕಿ(ಮಲ್ಲಿಕಾರ್ಜುನ ಅಕ್ಕಿ) ಸೇರಿದಂತೆ ಕೆಲವು ಜೆಡಿಎಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಅಕ್ಕಿಯವರನ್ನು ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಂಭಾವಿತ ವ್ಯಕ್ತಿ ಅಕ್ಕಿ ಶಾಸಕರಾಗಿ ನಮ್ಮಜೊತೆ ಕೆಲಸ ಮಾಡಿದ್ದರು. ನಮಗೆ ಸಾಕಷ್ಟು ಸಹಕಾರ ಮಾಡಿದ್ದರು. ಈಗ ಬೇಷರತ್ತಾಗಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ದಿವಂಗತ ಶಿವಳ್ಳಿ, ಅಕ್ಕಿ ಇಬ್ಬರೂ ಒಂದೇ ಊರಿನವರು. ಅಕ್ಕಿ ಜೊತೆ ತಾಲೂಕು ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಸಹ ಪಕ್ಷ ಸೇರಿದ್ದಾರೆ. ಇವರ ಸೇರ್ಪಡೆಯಿಂದ ಆ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ತರಲಿದೆ ಎಂದರು.
ಬಳಿಕ ಮಾತನಾಡಿದ ಅಕ್ಕಿ, 'ಕಾರ್ಯಕರ್ತರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಅವರ ಆಣತಿಯಂತೆ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಸಾಮಾನ್ಯ ಕಾರ್ಯಕರ್ತನಂತೆ ಕರ್ತವ್ಯ ನಿರ್ವಹಿಸಿ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಹೇಳಿದ್ದಾರೆ.
1994ರ ಚುನಾವಣೆಯಲ್ಲಿ ಜನತಾದಳದ ಎಂ.ಎಸ್. ಅಕ್ಕಿ ಮೊದಲ ಬಾರಿಗೆ ಜಯ ದಾಖಲಿಸಿದ್ದರೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿ ಎಮ್.ಎಸ್.ಅಕ್ಕಿ 28,184 ಮತಗಳನ್ನು ಪಡೆದುಕೊಂಡು ಎರಡನೇ ಬಾರಿಗೆ ಚುನಾಯಿತರಾಗಿದ್ದರು.
Advertisement