ಶಿರಾ: ಶಿರಾ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ, ಮೂರು ಪಕ್ಷಗಳು ತನ್ನ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಆರಂಭಿಸಿವೆ.
ಶಿರಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯೆ ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಮತ್ತು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕುರುಬ ಮತದಾರರು ಹೆಚ್ಚಿಗೆ ಇರುವ ಕಾಡಜ್ಜನಪಾಳ್ಯ, ಹುಣಸೆಹಳ್ಳಿ, ಯರವರಹಳ್ಳಿ ಮತ್ತು ಹೊಸೂರು ಗ್ರಾಮಗಳಲ್ಲಿ ಸಂಚರಿಸಿ ಟಿಬಿ ಜಯಚಂದ್ರ ಪರ ಪ್ರಚಾರ ಮಾಡಿದರು.
ಕಲ್ಕೆರೆ ರವಿಕುಮಾರ್ ಅವರಿಗೆ ಜೆಡಿಎಸ್ ಮತ್ತು ಬಿಕೆ ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು, ಈ ಇಬ್ಬರು ಕುರುಬ ಸಮುದಾಯದವರೇ ಆಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ರ್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಗ್ರಾಮಪಂಚಾಯತ್ ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ, ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದಾರೆ ಎಂದು ಕುಂಚಿಟಿಕ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ನಾಯಕ ಶಶಿಧರ್ ತಿಳಿಸಿದ್ದಾರೆ.
ನನ್ನ ಮಗ ರಂಗರಾಜು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದಿದ್ದ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ನನ್ನ ಮಗನಿಗೆ ಸನ್ಮಾನ ಮಾಡಿದ್ದರು, ಈಗ ನನ್ನ ಮಗಳು ಎಸ್ ಎಸ್ ಎಲ್ ಸಿ ಓದುತ್ತಿದ್ದಾಳೆ, ಅವಳಿಗೂ ಸಿದ್ದರಾಮಯ್ಯ ಅವರನ್ನು ನೋಡುವ ಭಾಗ್ಯ ಸಿಕ್ಕಿತು ಎಂದು ಗ್ರಾಮದಲ್ಲಿ ಪೆಟ್ಟಿ ಅಂಗಡಿ ನಡೆಸುತ್ತಿರುವ ತಿಮ್ಮರಾಯಿ ಎಂಬುವರು ಹೇಳಿದರು.
ಕಾಡಜ್ಜನಪಾಳ್ಯದಲ್ಲಿ ಕೆಲವು ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಮೊದಲು ಮಾಸ್ಕ್ ತೆಗೆಯುವಂತೆ ಹೇಳಿ ನಂತರ ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಿದರು. ಇದೇ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪಟ್ಟನಾಯಕನಹಳ್ಳಿ ಸ್ಪಟಿಕಾಪುರಿ ಮಠದ ನಂಜಾವಧೂತ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಮೋಟಾರ್ ಬೈಕ್ ರ್ಯಾಲಿ ನಡೆಸಿದರು. ದೇವೇಗೌಡರು ಬಾರಗೂರು ಗ್ರಾಮದಲ್ಲಿ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ಮಾಡುತ್ತಿರುವ ದೇವೇಗೌಡರು ನವೆಂಬರ್ 1 ರವರೆಗೂ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇನ್ನೂ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಇಬ್ಬರು ರಾಜೇಶ್ ಗೌಡ ಪರ ಪ್ರಚಾರ ನಡೆಸಿದರು.
Advertisement