ಮುಖ್ಯಮಂತ್ರಿಯಾಗುವ ಮುನ್ನ ಪಕ್ಷ ಅಧಿಕಾರಕ್ಕೆ ಬರಬೇಕು: ಸೈಲೆಂಟ್ ಆಗಿ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್
ಬೆಂಗಳೂರು: ಕೆಲವು ನಾಯಕರು ನಮ್ಮ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಸಹಜ. ಆದರೆ ಮುಖ್ಯಮಂತ್ರಿಯಾಗುವ ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಪಕ್ಷದವರಿಗೆ ಟಾಂಗ್ ನೀಡಿದ್ದಾರೆ.
ಜಮೀರ್ ಅಹ್ಮದ್ ಸೇರಿದಂತೆ ಇನ್ನು ಕೆಲವರು ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದರೆ ಇದಕ್ಕೆ ಪ್ರತಿಯಾಗಿ ಒಕ್ಕಲಿಗ ಸಮುದಾಯದಿಂದ ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದ್ದರು. ಈ ಕುರಿತು ಸುದ್ದಿಗಾರರಿಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ನಮ್ಮ ಹೈಕಮಾಂಡ್ ಹಾಗೂ ಶಾಸಕರು ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುತ್ತಾರೆ. ಸಾಕಷ್ಟು ಜನ ಅನೇಕ ಆಸೆ, ಆಕಾಂಶೆಗಳನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ನಾನು ಜವಾಬ್ದಾರನಲ್ಲ ಎಂದರು.
ಜನ ಪಕ್ಷವನ್ನು ಗೆಲ್ಲಿಸಿದ ನಂತರ ನಮ್ಮ ನಾಯಕರು, ಶಾಸಕರು ಹಾಗೂ ಪಕ್ಷ ಯಾವ ತೀರ್ಮಾನಕ್ಕೆ ಬರುತ್ತಾರೋ ಅದಕ್ಕೆ ಬದ್ಧ. ನಾನು ಸಾಮೂಹಿಕ ನಾಯಕತ್ವ ನಂಬುತ್ತೇನೆ ಎಂದು ಹಿಂದೆಯೂ ಹೇಳಿದ್ದೇ. ಇಂದು ಸಹ ಹೇಳುತ್ತಿದ್ದೇನೆ. ಜಮೀರ್ ಖಾನ್ ನನಗೂ ಸ್ನೇಹಿತರೆ, ಭಾವುಕರಾಗಿ ಆ ರೀತಿ ಮಾತನಾಡುತ್ತಾರೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು. ಸರ್ಕಾರಕ್ಕೆ ತಮ್ಮ ನಾಯಕರನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿದ ಡಿಕೆಶಿ, ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ನೀಡಲು ಸಿಆರ್ಪಿಎಫ್ ಪಡೆ ಬಂದಿರುವುದನ್ನು ನೋಡಿದರೆ ಸರ್ಕಾರ ತಮ್ಮದೇ ಪಕ್ಷದ ಕಾರ್ಯಕರ್ತರ ದುರ್ವತನೆಯನ್ನು ತಡೆಯಲು ಸಾಧ್ಯವಾಗದೇ ವಿಶೇಷ ಪಡೆ ಕರೆಸಿರುವುದು ಸ್ಪಷ್ಟವಾಗುತ್ತದೆ ಎಂದರು.
ನಕಲಿ ಮತದಾರ ಗುರುತಿನ ಚೀಟಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ ನೀಡಿದೆ. ಆದರೂ ಕೆಲವು ಪೊಲೀಸ್ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು ಬಿಜೆಪಿಯ ಜತೆ ಶಾಮೀಲಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದು, ವಿಚಾರವಾಗಿ ನಾವು ದೂರು ನೀಡಲಿದ್ದೇವೆ. ನಮ್ಮ ಕಾರ್ಯಕರ್ತರು ಕಾನೂನಿಗೆ ಬೆಲೆ ಕೊಟ್ಟು ಶಾಂತಿಯುತವಾಗಿ ಚುನಾವಣೆ ಮಾಡುತ್ತಾರೆ. ಬೇರೆಯವರು ನೀಡುವ ಹೇಳಿಕೆಗೆ ನಾವು ಜವಾಬ್ದಾರರಲ್ಲ. ಇಲ್ಲಿ ಮುಕ್ತವಾಗಿ ಚುನಾವಣೆ ನಡೆಸಬೇಕೆಂದು ಶಿವಕುಮಾರ್ ಹೇಳಿದರು.
ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಚಾಲಕರ ಕಷ್ಟ ಹಾಗೂ ಸುಖದಲ್ಲಿ ಭಾಗಿಯಾಗಿ,ಅವರ ಹಿತ ಕಾಯಲು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಓಲಾ, ಉಬರ್ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹಾಗೂ ಅಖಿಲ ಕರ್ನಾಟಕ ಆದರ್ಶ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ತಮ್ಮ ಬೆಂಬಲಿಗ ಸಮೂಹದೊಂದಿಗೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕೊರೋನಾ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೋ ,ಕ್ಯಾಬ್ ಚಾಲಕರಿಗೆ ಸರ್ಕಾರದಿಂದ ಸಹಾಯ ಸಿಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ನಾವು ಒತ್ತಡ ಹಾಕಿದೆವು.ತಿಂಗಳಿಗೆ ಕನಿಷ್ಠ 10 ಸಾವಿರ ಕೊಡಿ ಎಂದು ಕೇಳಿದೆವು.ರಾಜ್ಯ ಸರ್ಕಾರ 7.75 ಲಕ್ಷ ಚಾಲಕರಿಗೆ ಒಂದು ಬಾರಿ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದರು.ಆದರೆ ನಮಗಿರುವ ಮಾಹಿತಿ ಪ್ರಕಾರ ರಾಜ್ಯದ ಲ್ಲಿ 32 ಲಕ್ಷ ಜನ ಪರವಾನಿಗೆ ಪಡೆದು ಚಾಲಕರಾಗಿ ದುಡಿಯುತ್ತಿದ್ದಾರೆ.ಸರ್ಕಾರ ಲಾಕ್ ಡೌನ್ ಹೇರಿದಾಗ ಇವ ರ್ಯಾರು ತಮ್ಮ ವಾಹನ ಚಾಲನೆ ಮಾಡದೆ ಸರ್ಕಾರಕ್ಕೆ ಬೆಂಬಲ ನೀಡಿದರು. ಇದರಿಂದ ಅವರ ಕುಟುಂಬಗಳಿಗೆ ಎಷ್ಟು ತೊಂದರೆಯಾಗಿದೆ ಎಂದು ಈ ಸರ್ಕಾರದ ಕಣ್ಣಿಗೆ ಕಾಣಲಿಲ್ಲ,ಕಿವಿಗೆ ಕೇಳಲಿಲ್ಲ,ಹೃದಯಕ್ಕೆ ಮುಟ್ಟಲಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ನಮ್ಮ ಆಗ್ರಹದ ಮೇರೆಗೆ ಸರ್ಕಾರ 7.75 ಲಕ್ಷ ಚಾಲಕರಿಗೆ ಪರಿಹಾರ ಘೋಷಿಸಿದರು. ನಂತರ ನಾನು ಬೇರೆ ಕಡೆ ಪ್ರವಾಸ ಕೈಗೊಂಡಾಗ ಸರ್ಕಾರ ಘೋಷಿಸಿರುವ ಪರಿಹಾರ ಹೆಚ್ಚೆಂದರೆ ಶೇ.10ರಷ್ಟು ಮಂದಿಗೆ ತಲುಪಿರಬಹುದು. ಉಳಿದವರಿಗೆ ಒಂದು ರೂಪಾಯಿಯೂ ತಲುಪಿಲ್ಲ. ಸರ್ಕಾರ ಚಾಲಕರ ಮಾಹಿತಿಯನ್ನು ತಂತ್ರಜ್ಞಾನ ಮೂಲಕ ಅಪ್ಲೋಡ್ ಮಾಡಲು ಹೇಳಿ ಚಾಲಕರು ಪರದಾಡಿದ್ದನ್ನು ನೋಡಿದ್ದೇವೆ. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡಿದ್ದೇವೆ. ಅವರಿಗೆ ಈ ತಂತ್ರಜ್ಞಾನ ಮೂಲಕ ಮಾಹಿತಿ ನೀಡುವುದು ಗೊತ್ತಿದ್ದರೆ ಅವರು ಚಾಲಕ ರಾಗಿ ಯಾಕೆ ಕೆಲಸ ಮಾಡುತ್ತಿದ್ದರು? ಅವರು ಕಂಪ್ಯೂಟರ್ ಕೆಲಸ ಮಾಡುತ್ತಿದ್ದರು.ಪರವಾನಿಗೆ ಇರುವವರಿಗೆ ಅರ್ಧ ಗಂಟೆಯಲ್ಲಿ ಚೆಕ್ ಬರೆದು ಕೊಡಲು ಈ ಸರ್ಕಾರಕ್ಕೆ ಯಾಕೆ ಸಾಧ್ಯವಾಗಲಿಲ್ಲ. ಘೋಷಣೆ ಮಾಡಿ 2 ತಿಂಗಳಾದರೂ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಇದನ್ನು ನೋಡಿ ಓಲಾ,ಉಬರ್ ಚಾಲಕರ ಸಂಘದ ಅಧ್ಯಕ್ಷರಾ ದ ತನ್ವೀರ್ ಪಾಷಾ ಹಾಗೂ ಇತರ ಸಂಘ ಸಂಸ್ಥೆಗಳನ್ನು ಕರೆಸಿ ಅವರ ಸ್ಥಿತಿ ಬಗ್ಗೆ ಮಾತನಾಡಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕೆಲವು ನಾಯಕರು ನಮ್ಮ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಆಗ್ತಾರೆ ಅಂತಾ ಹೇಳುತ್ತಾರೆ. ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಆಮೇಲೆ ನಮ್ಮ ಹೈಕಮಾಂಡ್ ಹಾಗೂ ಶಾಸಕರು ಮುಖ್ಯಮಂತ್ರಿಯಾರಾಗಬೇಕು ಎಂದು ತೀರ್ಮಾನ ಮಾಡುತ್ತಾರೆ. ಸಾಕಷ್ಟು ಜನ ಅನೇಕ ಆಸೆಗಳನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ನಾನು ಜವಾಬ್ದಾರನಲ್ಲ. ಜನ ಪಕ್ಷವನ್ನು ಗೆಲ್ಲಿಸಿದ ನಂತರ ನಮ್ಮ ನಾಯಕರು, ಶಾಸಕರು ಹಾಗೂ ಪಕ್ಷ ಯಾವ ತೀರ್ಮಾನಕ್ಕೆ ಬರುತ್ತಾರೋ ಅದಕ್ಕೆ ಬದ್ಧ. ನಾನು ಸಾಮೂಹಿಕ ನಾಯಕತ್ವ ನಂಬುತ್ತೇನೆ ಎಂದು ಅವತ್ತು ಇದನ್ನೇ ಹೇಳಿದ್ದೆ, ಇವತ್ತು ಇದನ್ನೇ ಹೇಳುತ್ತಿದ್ದೇನೆ. ಜಮೀರ್ ಖಾನ್ ನನಗೂ ಸ್ನೇಹಿತರೆ, ಭಾವುಕರಾಗಿ ಆ ರೀತಿ ಮಾತನಾಡುತ್ತಾರೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂಬ ಮಾತಿಗೆ ತಿರುಗೇಟು ನೀಡಿದರು.