ಚುನಾವಣಾ ಆಯೋಗ ಬದುಕಿದ್ದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್

ಜಾತಿ ರಾಜಕೀಯ ಮಾಡುವುದು ಬಿಜೆಪಿಯವರೇ ಹೊರತು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಜಾತಿ ರಾಜಕೀಯ ಮಾಡುವುದು ಬಿಜೆಪಿಯವರೇ ಹೊರತು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯದ ಜನರಿಗೆ ವಿಜಯ ದಶಮಿ ಹಬ್ಬದ ಶುಭಾಶಯಗಳು. ಈ ವರ್ಷ ಎದುರಾಗಿರುವ ಕೊರೋನಾ ಸಂಕಷ್ಟಗಳನ್ನು ಆ ದೇವಿ ಹಾಗೂ ಭಗವಂತ ಆದಷ್ಟು ಬೇಗ ನಿವಾರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಒಕ್ಕಲಿಗ ಜಾತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಮುನಿರತ್ನ ಆರೋಪಕ್ಕೆ ಪ್ರತಿಕ್ರಿಯಿಸಿದರು. ನಾನು ಬಹಿರಂಗವಾಗಿ ಎಲ್ಲಿಯೂ ಕೂಡ ಹೇಳಿಕೆ ಕೊಟ್ಟಿಲ್ಲ. ಯಡಿಯೂರಪ್ಪ ಈ ಹಿಂದೆ ಗೋಕಾಕ್‌ನಲ್ಲಿ ವೀರಶೈವರು ಬಿಜೆಪಿಗೆ ಮತ ಹಾಕಿ ಎಂದು ಬಹಿರಂಗವಾಗಿ ಹೇಳಿದ್ದರು. ಈಗ ಸಿ.ಟಿ ರವಿ, ಅಶ್ವಥ್ ನಾರಾಯಣ, ಅಶೋಕ್ ಕೂಡ ಅದೇ ರೀತಿ ಹೇಳುತ್ತಿದ್ದಾರೆ ಎಂದರು.

ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮ ಫೋಟೋ ಹಾಕಿಕೊಂಡು ಸೆಟ್ಟಾಪ್ ಬಾಕ್ಸ್ ಹಂಚುತ್ತಿರೋದನ್ನು ಒಪ್ಪಿಕೊಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. 

ರಾಜರಾಜೇಶ್ವರಿ ನಗರದಲ್ಲಿ ಅಭ್ಯರ್ಥಿ ತಮ್ಮ ಕಂಪನಿ ಹೆಸರಲ್ಲಿ ಸೆಟ್ಟಾಪ್ ಬಾಕ್ಸ್ ಕೊಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ, ಕಾನೂನಿಗೆ ರಕ್ಷಣೆ ಕೊಡುವುದಾದರೆ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಅಗ್ರಹಿಸಿದರು. 

ಈ ವಿಚಾರದಲ್ಲಿ ಯಾರು ದೂರು ನೀಡಬೇಕಾದ ಅಗತ್ಯವಿಲ್ಲ. ಅಭ್ಯರ್ಥಿ ಅದು ನನ್ನ ವ್ಯವಹಾರ ಅಂತಾ ಒಪ್ಪಿ ಕೊಂಡಿದ್ದಾರೆ. ಅದು ವ್ಯವಹಾರವಾಗಿದ್ದರೆ ತಮ್ಮ ಫೋಟೋ ಹಾಕಿಕೊಂಡು ಕೊಡಲು ನೀತಿ ಸಂಹಿತೆಯಲ್ಲಿ ಅವಕಾಶ ಇಲ್ಲ. ಅವರ ಈ ಹೇಳಿಕೆಯೇ ಅವರು ಸೆಟ್ಟಾಪ್ ಬಾಕ್ಸ್ ಕೊಡುತ್ತಿರುವುದು ಸತ್ಯ ಎಂದು ಹೇಳುತ್ತಿದೆ. ಕೂಡಲೇ ಬಿಜೆಪಿ ಅಭ್ಯರ್ಥಿ ಪರ ಐಪಿಸಿ 171 ಎ,ಬಿ,ಸಿ,ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. 123 ಜನಪ್ರತಿನಿಧಿ ಕಾಯ್ದೆ ಅಡಿಯಲ್ಲೂ ಕಾನೂನಿನ ಕ್ರಮ ಕೈಗೊಳ್ಳಬೇಕು. ಇನ್ನು ಚುನಾವಣಾ ಆಯೋಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.

ನನ್ನ ವಿರುದ್ಧ ಕೇವಲ ಸದಾನಂದ ಗೌಡರು, ಅಶ್ವಥ್ ನಾರಾಯಣ, ಆರ್.ಅಶೋಕ್, ಸಿ.ಟಿ ರವಿ, ಎಸ್.ಸೋಮಶೇಖರ್ ಇವರೇ ಯಾಕೆ ಟೀಕೆ ಮಾಡುತ್ತಿದ್ದಾರೆ. ಕೇವಲ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಯಡಿಯೂರಪ್ಪನವರು ಯಾಕೆ ಮಾತನಾಡುತ್ತಿಲ್ಲ. ನಾನು ಯಾವ ವಿಚಾರದಲ್ಲಿ ಜಾತಿ ರಾಜ ಕಾರಣ ಮಾಡುತ್ತಿದ್ದೇನೆ? ನನ್ನ ವಿರುದ್ಧ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಇದು ಜಾತಿ ರಾಜಕಾರಣ ಅಲ್ಲವೇ? ನನಗೆ ಕಾಂಗ್ರೆಸ್ಸೇ ಜಾತಿ. ರೈತ, ಸಿಪಿಐ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ನಾವು ಕಾರಣವಾಗಿದ್ದರೆ, ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿ ಎಂದು ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com