ಕುಮಾರಸ್ವಾಮಿ-ಸಿದ್ದರಾಮಯ್ಯ
ಕುಮಾರಸ್ವಾಮಿ-ಸಿದ್ದರಾಮಯ್ಯ

ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ, ನೀವೇ ಸಿಎಂ ಅಂತಾ ಮನೆ ಬಾಗಿಲಿಗೆ ಬಂದಿದ್ದರು: ಕುಮಾರಸ್ವಾಮಿ

ಈ ಹಿಂದೆ ಅವರಪ್ಪನಾಣೆ ನಾನು ಮುಖ್ಯಮಂತ್ರಿ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ಬೆಂಗಳೂರು: ಈಗ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಮುಖ್ಯಮಂತ್ರಿ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಗರದಲ್ಲಿಂದು ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಬೆಳೆದು ಬೆನ್ನಿಗೆ ಚೂರಿ ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷಕ್ಕೆ ಹೀರೋ ಆಗಲು ಸಾಧ್ಯವೇ ಇಲ್ಲ. ಅವರು ಎಂದಿಗೂ ವಿಲನ್. ಕಾಂಗ್ರೆಸ್ ಪಕ್ಷದ  ಒಂದು ವರ್ಗಕ್ಕೂ ಸಿದ್ದರಾಮಯ್ಯ ವಿಲನ್. ಮುಂದೆ ಕೂಡ ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತ ಸ್ಥಿತಿಗೆ ಬರುವ ಕಾಲ ಬಹಳ ದೂರವಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಜೆಡಿಎಸ್‌ ಬಡವರು, ಶ್ರಮಿಕರು, ರೈತರು ಬೆಳೆಸಿದ ಪಕ್ಷ. ನಮ್ಮ ಹೊಣೆಗಾರಿಕೆ ಏನಿದ್ದರೂ ಜನರದ್ದು, ನಾವು ಅಂಬಾನಿ, ಆದಾನಿಗೆ ನಮ್ಮ ಪಕ್ಷದ ಜವಾಬ್ದಾರಿ ನೀಡಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ನಾವು ಟಿಕೆಟ್‌ ನೀಡಿದ್ದೇವೆ. ಜೆಡಿಎಸ್‌ನ್ನು ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ. ಕೊರೋನಾ ಬಂದಾಗ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಅಂದ್ರು, ಆಮೇಲೆ ದೀಪ ಬೆಳಗಿಸಿ ಅಂದ್ರು. ಆ ದೀಪ ಹಚ್ಚಿ ಬಿಜೆಪಿಯವರು ತಮ್ಮ ಜೀವನ ಬೆಳಗಿಸಿಕೊಂಡ್ರು. ಜನ ರ ಕಷ್ಟಗಳಿಗೆ ದೀಪ ಹಚ್ಚಿ ಬೆಳಕು ನೀಡಲಿಲ್ಲ ಎಂದ ಅವರು, ಹತ್ತು ವರ್ಷದಿಂದ ಬಿಜೆಪಿ ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಪ್ರತಿವರ್ಷ ಕಾಲುವೆ ದುರಸ್ಥಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೂ, ಮಳೆ ಬಂದಾಗ ಬೆಂಗಳೂರಿನ ಅನೇಕ ಪ್ರದೇಶಗಳಿಗೆ ನೀರು ನುಗ್ಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಸಭೆಗೆ ಅಡ್ಡಿಪಡಿಸಿದವರನ್ನು ಬಂಧಿಸಿ ಎಂದು ಪೊಲೀಸ್‌ ಠಾಣೆ ಎದುರು ರಾತ್ರಿವರೆಗೂ ಪ್ರತಿಭಟನೆ ನಡೆಸುವ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್‌ ನಾಯಕರು. ಡಿಜೆ.ಹಳ್ಳಿ, ಕೆಜಿ.ಹಳ್ಳಿ ಗಲಭೆಯಲ್ಲಿ ತಮ್ಮ ಶಾಸಕರ ಮನೆ, ಪೊಲೀಸ್‌ ಠಾಣೆ ಸುಟ್ಟವರನ್ನು ಬಂಧಿಸಿ ಎಂದು ಧರಣಿ ನಡೆಸಬೇಕಿತ್ತು ಎಂದು ಪರೋಕ್ಷವಾಗಿ ಸಿದ್ದು ಆಕ್ರೋಷ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ನಾನು ನೊಂದಿದ್ದೇನೆ. ಬಡ ಕುಟುಂಬಗಳ ರಕ್ಷಣೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ, ಹಳ್ಳಿಯಲ್ಲಿರುವ ಡಿ.ಕೆ.ರವಿ ಅವರ ತಂದೆ-ತಾಯಿಯನ್ನೇ ನೋಡಲಿಲ್ಲ. ಅವರ ಬದುಕಿಗೆ ಒಂದು ದಾರಿ ಮಾಡಿ ಕೊಡಲಾಗಲಿಲ್ಲ. ಈಗ ನಿಮ್ಮ ಕಷ್ಟಗಳನ್ನೆಲ್ಲಾ ಕೇಳ್ತಾರಾ, ಸಮಸ್ಯೆಗಳನ್ನು ಬಗೆಹರಿಸ್ತಾರಾ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 

ನಮ್ಮ ದುಡ್ಡಿನಲ್ಲಿ ಮಹಾರಾಷ್ಟ್ರದವರ ಪ್ರತಿಮೆಯನ್ನು ನಮ್ಮ ನೆಲದಲ್ಲಿ ಬಿಜೆಪಿಯವರು ಸ್ಥಾಪಿಸುತ್ತಾರೆ. 2-3 ತಿಂಗಳಲ್ಲಿ ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಮೊನ್ನೆ ಮಳೆ ಬಂದಾಗ ಬೆಂಗಳೂರೇ ಕೊಚ್ಚಿಕೊಂಡು ಹೋಯ್ತು. ಇದೇನಾ ಇವರ ಮಾದರಿ ನಗರ ಎಂದು ಪ್ರಶ್ನಿಸಿದ ಅವರು, 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಹಾಗೂ ಮೈಸೂರು ಹೊರವಲಯಗಳ ಅಭಿವೃದ್ಧಿಗೆ 25 ಸಾವಿರ ರೂ. ನೀಡಿದ್ದೇನೆ ಎಂದು ಹೇಳಿದರು. 

ಕೇವಲ ರೈತರ ಸಾಲಮನ್ನಾ ಮಾಡಿರುವುದಲ್ಲದೇ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿ ಎಂದು ಬಡವರ ಬಂಧು ಆರಂಭಿಸಿದೆ. ಸಾಲಗಾರರ ಶೋಷಣೆಯಿಂದ ಜನರನ್ನು ರಕ್ಷಿಸಲು ಋಣಮುಕ್ತ ಕಾಯಿದೆ ಜಾರಿಗೆ ತಂದಿದ್ದೆ. ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ನೂರು ಕೋಟಿ ರೂ. ತೆಗೆದಿರಿಸಿದ್ದೆ ಇವುಗಳನ್ನೆಲ್ಲಾ ಈಗಿನ ಸರಕಾರ ನಿಲ್ಲಿಸಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಬಿಜೆಪಿ ಅಭ್ಯರ್ಥಿ ಹಣ ಲೂಟಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ, ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರೆ. ಕನಕಪುರದಿಂದ ಗೂಂಡಾಗಳನ್ನು ಕರೆಸಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿರತ್ನ ಕಾಂಗ್ರೆಸ್‌ ವಿರುದ್ಧ ಆರೋಪಿಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳಿಗಿಂತ ರಾಜರಾಜೇಶ್ವರಿ ನಗರದಲ್ಲಿ ನಮಗೆ ಶಾಂತಿಯ ಅವಶ್ಯಕತೆ ಇದೆ ಎಂದು ಹೇಳಿದರು.

ಬಂಗಾರಪ್ಪ ನಗರದ ಮಹಿಳೆಯೊಬ್ಬರು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಮಗೆ ಹಕ್ಕುಪತ್ರ ಕೊಡಿಸಿ. ಇಲ್ಲಿ ಬೆದರಿಕೆ ಹಾಕ್ತಾರೆ ನಮಗೆ ರಕ್ಷಣೆ ಕೊಡಿಸಿ. ನೀವು ಹಕ್ಕುಪತ್ರ ಕೊಟ್ರೆ ನಮಗೆ ಎರಡು ಕಣ್ಣು ಕೊಟ್ಟಂಗೆ ಎಂದು ಮನವಿ ಮಾಡಿದರು. ಮಹಿಳೆಯ ಅಹವಾಲು ಆಲಿಸಿದ ಮಾಜಿ ಸಿಎಂ ನಿಮಗೇನೆ ಕಷ್ಟ ಬಂದ್ರೂ, ಯಾರೇ ಬೆದರಿಕೆ ಹಾಕಿದ್ರೂ ನಮ್ಮ ಮನೆಗೆ ಬನ್ನಿ, ಹಕ್ಕುಪತ್ರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭ ದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ, ಮಳವಳ್ಳಿ ಶಾಸಕ ಅನ್ನದಾನಿ, ಪರಿಷತ್‌ ಸದಸ್ಯ ರಮೇಶ್‌ ಗೌಡ, ಮಾಜಿ ಪರಿಷತ್ ಸದಸ್ಯ ಟಿ.ಎನ್‌.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿ ಅನೇಕ ಮುಖಂಡರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com