ಕೊರೋನಾ ಆತಂಕದ ಮಧ್ಯೆ ವಿಧಾನಮಂಡಲ ಅಧಿವೇಶನ ಆರಂಭ: ಇತ್ತೀಚೆಗೆ ಮೃತಪಟ್ಟ ಗಣ್ಯರಿಗೆ ಸಂತಾಪ

ಕೊರೋನಾ ಆತಂಕದ ನಡುವೆ ಇಂದು ವಿಧಾನಮಂಡಲದ ಅಧಿವೇಶನ ಆರಂಭಗೊಂಡಿದೆ.
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕೊರೋನಾ ಆತಂಕದ ನಡುವೆ ಇಂದು ವಿಧಾನಮಂಡಲದ ಅಧಿವೇಶನ ಆರಂಭಗೊಂಡಿದೆ.

ಬೆಳಗ್ಗೆ 11 ಗಂಟೆಗೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಅವರನ್ನು ಪಕ್ಷಾತೀತವಾಗಿ ಎಲ್ಲರೂ ಪ್ರೀತಿಸುತ್ತಿದ್ದರು. ಪ್ರೀತಿಯಿಂದ ಅವರನ್ನು ಪ್ರಣಬ್ ದಾದಾ ಎಂದೇ ಕರೆಯಲಾಗುತ್ತಿತ್ತು ಎಂದು ಸ್ಮರಿಸಿದರು.

ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಅಶೋಕ ಗಸ್ತಿ ಅವರು ಅತ್ಯಂತ ಸರಳ, ಸಜ್ಜನಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಮಾಜಿ ಸಚಿವ ಎಂ.ವಿ. ರಾಜಶೇಖರನ್ ಅವರು ಕ್ವಿಟ್ ಇಂಡಿಯಾ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂ ಸದನಗಳಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಗ್ರಾಮೀಣಾಭಿವೃದ್ಧಿ ಕುರಿತು 100ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಗಾಂಧಿ ತತ್ವವನ್ನು ಕೊನೆಯವರೆಗೂ ಜೀವನದಲ್ಲಿ ಅಳವಡಿಸಿಕೊಂಡ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು ಎಂದು ಹೇಳಿದರು.

ಅದೇ ರೀತಿ ರಾಜಾಮದನ್ ಗೋಪಾಲ್ ನಾಯಕ್, ಮಾಜಿ ಸಚಿವ ಜಿ.ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್, ರತನ್ ಸಿಂಗ್, ವಿನ್ನಿಫ್ರೆಡ್ ಫರ್ನಾಂಡಿಸ್, ಸಿ.ಗುರುಸ್ವಾಮಿ, ಎಂ.ಜೆ.ಅಪ್ಪಾಜಿಗೌಡ, ಕೇಶವಾನಂದ ಭಾರತೀ ಸ್ವಾಮೀಜಿ, ಮಾಜಿ ಶಾಸಕ ಅಪ್ಪಾಜಿ ಗೌಡ, ಶಿರಾ ಶಾಸಕ ಸತ್ಯನಾರಾಯಣ, ಸಾಹಿತಿ ಕೆ.ಎಸ್. ನಿಸಾರ್ ಅಹ್ಮದ್, ಶ್ಯಾಮಲಾ ಜಿ ಭಾವೆ, ಪಂಡಿತ್ ಜಸ್ ರಾಜ್, ಯಕ್ಷಗಾನ ಕಲಾವಿದ ಹೊಸತೋಟ ಗಜಾನನ ಭಟ್ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಗಡಿಯಲ್ಲಿ ಉಂಟಾದ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರು ಮತ್ತು ಪ್ರವಾಹದಲ್ಲಿ ಮೃತಪಟ್ಟವರಿಗೂ ಸಂತಾಪ ಸೂಚಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಕಳೆದ ಅಧಿವೇಶನ ಮತ್ತು ಈ ಅವಧಿಯ ನಡುವೆ ಹಲವು ಗಣ್ಯರು ನಮ್ಮನ್ನು ಅಗಲಿದ್ದಾರೆ. ಶಿರಾ ಶಾಸಕ ಸತ್ಯನಾರಾಯಣ ಬಡವರು ಮತ್ತು ರೈತರ ಪರವಾಗಿದ್ದರು. ಜನಾನುರಾಗಿಯಾಗಿದ್ದ ಅವರ ನಿಧನದಿಂದ ಉತ್ತಮ ಶಾಸಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುಮಾಸ್ತ ಕೆಲಸದಿಂದ ರಾಷ್ಟ್ರಪತಿ ಹುದ್ದೆಯವರೆಗಿನ ರಾಜಕೀಯ ಜೀವನ ಅದ್ಭುತವಾದುದು. ಅತ್ಯುತ್ತಮ ರಾಜಕಾರಣಿಯಾಗಿ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು. ರಾಷ್ಟ್ರಪತಿ ಭವನ್ನು ಜನರಿಗೆ ಹತ್ತಿರವಾಗಿಸಿ, ಹೆಚ್ಚು ಪ್ರಜಾಸತ್ತಾತ್ಮಕವಾಗಿಸಿದ್ದರು. ಅವರ ನಿಧನದಿಂದ ಸಮರ್ಥ ಮತ್ತು ಅತ್ಯುತ್ತಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.

ಅದೇ ರೀತಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಮಾಜಿ ಸಚಿವ ಎಂ.ವಿ.ರಾಜಶೇಖರ್ , ರಾಜಾಮದನ್ ಗೋಪಾಲ್ ನಾಯಕ್, ಮಾಜಿ ಸಚಿವ ಜಿ.ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್, ರತನ್ ಸಿಂಗ್, ವಿನ್ನಿಫ್ರೆಡ್ ಫರ್ನಾಂಡಿಸ್, ಸಿ.ಗುರುಸ್ವಾಮಿ, ಎಂ.ಜೆ.ಅಪ್ಪಾಜಿಗೌಡ, ಕೇಶವಾನಂದ ಭಾರತೀ ಸ್ವಾಮೀಜಿ, ಮಾಜಿ ಶಾಸಕ ಅಪ್ಪಾಜಿ ಗೌಡ, ಶಿರಾ ಶಾಸಕ ಸತ್ಯನಾರಾಯಣ, ಸಾಹಿತಿ ಕೆ.ಎಸ್. ನಿಸಾರ್ ಅಹ್ಮದ್, ಶ್ಯಾಮಲಾ ಜಿಭಾವೆ, ಪಂಡಿತ್ ಜಸ್ ರಾಜ್, ಯಕ್ಷಗಾನ ಕಲಾವಿದ ಹೊಸತೋಟ ಗಜಾನನ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಕ ನಿರ್ಣಯ ಮೇಲೆ ಮಾತನಾಡಿ, ಮೃತರ ಗುಣಗಾಣ ಮಾಡಿದರು.
ಪ್ರಣಬ್ ಮುಖರ್ಜಿ ಅವರು ಹಣಕಾಸು, ವಿದೇಶಾಂಗ, ರಕ್ಷಣಾ ಸೇರಿ ಕೇಂದ್ರದ ಮಹತ್ವದ ಖಾತೆಗಳನ್ನು ನಿಣಾಯಿಸಿದ್ದರು. ಇದರ ಜೊತೆಗೆ ವಾಣಿಜ್ಯ, ಕೈಗಾರಿಕಾ ಖಾತೆಗಳನ್ನು ನಿಭಾಯಿಸಿದ್ದರು. ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿಯಾಗಿದ್ದಾಗ 5 ವರ್ಷಗಳ ಕಾಲ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಕೆಲವು ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬೇರೆ ಪಕ್ಷಕ್ಕೆ ಹೋದರೂ ಮತ್ತೆ ಕಾಂಗ್ರೆಸ್ ಗೆ ಮರಳಿ ಬಂದಿದ್ದರು. 2012ರಲ್ಲಿ ರಾಷ್ಟ್ರಪತಿಯಾದ ಮೇಲೆ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ, ಅವರ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿತ್ತು. ಇತಿಹಾಸ, ರಾಜಕೀಯ, ಅರ್ಥವ್ಯವಸ್ಥೆ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಕರ್ತರೂ, ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ದೇಶದ ಹಣಕಾಸು ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಉತ್ತಮ ಹಣಕಾಸು ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಬಾರಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಯಾವುದೇ ಮಸೂದೆಗಳು ಅಂಕಿತಕ್ಕೆ ಹೋದಾಗ, ಕೂಡಲೇ ಅವರು ಅಂಕಿತ ಹಾಕುತ್ತಿದ್ದರು. ಎಸ್ ಟಿಪಿ ಟಿಎಸ್ ಪಿ ಮಸೂದೆ ವಿಚಾರವಾಗಿ ಅವರನ್ನು ತಾವು ಭೇಟಿ ಮಾಡಿ ವಿವರಿಸಿ ದೆಹಲಿಯಿಂದ ಬೆಂಗಳೂರಿಗೆ ಬರುವ ಮೊದಲು ಅಂಕಿ ಹಾಕಿ ಕಳುಹಿಸಿದ್ದರು ಎಂದು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com