ಬೆಂಗಳೂರು: ರೈತರಿಗಾಗಿ ಹೋರಾಡುವುದಕ್ಕೆ ಹೆಮ್ಮೆ ಇದೆ ಎಂದು ರಾಜ್ಯಸಭೆಯ ಅಮಾನತುಗೊಂಡ ಸಂಸದ ಸಯೀದ್ ನಾಸಿರ್ ಹುಸೇನ್ ಹೇಳಿದ್ದಾರೆ.
ರೈತರ ಹಕ್ಕುಗಳಿಗಾಗಿ ನಿಂತಿದ್ದಕ್ಕಾಗಿ ಯಾವುದೇ ವಿಷಾದವೂ ಇಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಸಂಸದರು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ 2 ಮಸೂದೆಗಳಿಗೆ ಕೇಂದ್ರ ಸರ್ಕಾರ ಅಂಗೀಕಾರ ಪಡೆಯುವ ಸಂದರ್ಭದಲ್ಲಿ ರಾಜ್ಯಸಭೆ ಉಪಾಧ್ಯಕ್ಷರ ಪೀಠದ ಎದುರು ಪ್ರತಿಭಟನಡೆಸಿ, ಮೈಕ್ ಕಿತ್ತೆಸೆದು ರೂಲ್ ಬುಕ್ ಹರಿದು ದುರ್ವರ್ತನೆ ತೋರಿದ ಕಾರಣಕ್ಕಾಗಿ ಒಂದು ವಾರಗಳ ಕಾಲ ಅಮಾನತುಗೊಂಡ 8 ಸಂಸದರ ಪೈಕಿ ಹುಸೇನ್ ಕೂಡ ಒಬ್ಬರಾಗಿದ್ದಾರೆ.
ರೈತರ ಒಳಿತಿಗಾಗಿ ಹೋರಾಟ ನಡೆಸುವುದರಲ್ಲಿ ಹೆಮ್ಮೆ ಇದೆ. ರೈತ ದೇಶದ ಅನ್ನದಾತ, ಬಿಜೆಪಿ ಸರ್ಕಾರ ಸದನದ ನಿಯಮಗಳನ್ನು ಗಾಳಿಗೆ ತೂರಿ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಎನ್ ಡಿಎ ಮಿತ್ರಪಕ್ಷಗಳೇ ಈ ಮಸೂದೆಯನ್ನು ವಿರೋಧಿಸುತ್ತಿದ್ದವು ಇಂತಹ ಪರಿಸ್ಥಿತಿಯಲ್ಲಿ ರಾಜ್ಯಸಭೆಯಲ್ಲಿ ಅವರಿಗೆ ಅಗತ್ಯ ಬಹುಮತ ಇಲ್ಲ ಎಂಬುದು ಬಿಜೆಪಿಗೆ ಗೊತ್ತಿತ್ತು, ಆದ್ದರಿಂದಲೇ ನಿಯಮಾವಳಿಗಳನ್ನು ಗಾಳಿಗೆ ತೂರಿ ಮಸೂದೆ ಅಂಗೀಕರಿಸಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಅತ್ಯಂತ ದುರ್ಬಲರ ಪರ ಧ್ವನಿ ಎತ್ತುವುದು ನನ್ನ ಕರ್ತವ್ಯ ಎಂದು ಹುಸೇನ್ ಹೇಳ್ದಿದಾರೆ.
"ಅವರು ನನ್ನನ್ನು ಸಂಸತ್ ನಿಂದ ಹೊರಹಾಕಬಹುದು, ಆದರೆ ಸಂಸತ್ ಒಳಗೆ, ಹೊರಗೆ ನಾನು ರೈತರ ಪರ ನಿಲ್ಲುತ್ತೇನೆ ಎಂದು ಹುಸೇನ್ ತಿಳಿಸಿದ್ದಾರೆ.
Advertisement